
ಭಾರತ ತಂಡದ ಅಟಗಾರರು
–ಪಿಟಿಐ ಚಿತ್ರ
ಮುಂಬೈ: ಮಂಗಳವಾರ ನಡೆದ ಚಂದ್ರಗ್ರಹಣದ ಪರಿಣಾಮ ಭಾರತ ಕ್ರಿಕೆಟ್ ತಂಡದ ಅಭ್ಯಾಸದ ಮೇಲೂ ಆಯಿತು!
ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ 5ರಂದು ಭಾರತ ತಂಡವು ಇಂಗ್ಲೆಂಡ್ ಎದುರಿನ ಸೆಮಿಫೈನಲ್ನಲ್ಲಿ ಆಡಲಿದೆ. ಅದಕ್ಕಾಗಿ ಮಂಗಳವಾರ ಸಂಜೆ 6ರಿಂದ ರಾತ್ರಿ 9ರವರೆಗೆ ಹೊನಲು ಬೆಳಕಿನಲ್ಲಿ ತಂಡದ ಆಟಗಾರರು ತಾಲೀಮು ನಡೆಸಬೇಕಿತ್ತು. ಆದರೆ ಚಂದ್ರಗ್ರಹಣವಿದ್ದ ಕಾರಣ ಸಮಯ ಬದಲಾವಣೆ ಮಾಡಿಕೊಂಡು ರಾತ್ರಿ 7.20ಕ್ಕೆ ಅಭ್ಯಾಸ ಆರಂಭಿಸಿತು.
ನೆರವು ಸಿಬ್ಬಂದಿ ಮತ್ತು ಕೋಚ್ಗಳು ಆಟಗಾರರಿಗಿಂತ ಮೊದಲು ಕ್ರೀಡಾಂಗಣಕ್ಕೆ ಬಂದರು. ಮೈದಾನದಲ್ಲಿರುವ ಫ್ಲಡ್ಲೈಟ್ಗಳನ್ನು ಸಂಜೆ 6.50ರಿಂದಲೇ ಬೆಳಗಿಸಲಾಗಿತ್ತು.
ವಾಂಖೆಡೆ ಸ್ತಬ್ಧ: ಕರನ್
‘ವಾಂಖೆಡೆ ಕ್ರೀಡಾಂಗಣ ಅದ್ಭುತವಾಗಿದೆ. ಆದರೆ ಗುರುವಾರ ರಾತ್ರಿ ಇದು ಸ್ತಬ್ಧವಾಗಲಿದೆ ಎಂಬ ನಂಬಿಕೆ ನನಗಿದೆ’ ಎಂದು ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಆಲ್ರೌಂಡರ್ ಸ್ಯಾಮ್ ಕರನ್ ಅವರು ಹೇಳಿದ್ದಾರೆ.
ಇಲ್ಲಿ ನಡೆಯಲಿರುವ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವು ಹಾಲಿ ಚಾಂಪಿಯನ್ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿರುತ್ತದೆ. ಅವರ ಹರ್ಷೋದ್ಘಾರಗಳು ಮುಗಿಲು ಮುಟ್ಟುತ್ತವೆ. ಆದರೆ ಭಾರತದ ಎದುರು ಮೇಲುಗೈ ಸಾಧಿಸುವ ಮೂಲಕ ಪ್ರೇಕ್ಷಕ ಗಣವನ್ನು ‘ಮೌನ’ಗೊಳಿಸುವ ಅರ್ಥದಲ್ಲಿ ಕರನ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ಪಿಚ್ ಚೆನ್ನಾಗಿದೆ. ಬೌಂಡರಿ ಅಂತರವೂ ಕಡಿಮೆ. ಆದ್ದರಿಂದ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದೆ. ನಾವು ಕೂಡ ಇಲ್ಲಿ ಬಹಳಷ್ಟು ಪಂದ್ಯಗಳಲ್ಲಿ ಆಡಿದ್ದೇವೆ. ಭಾರತ ತಂಡದ ಎದುರು ಹಾಗೂ ಐಪಿಎಲ್ ಪಂದ್ಯಗಳಲ್ಲಿ ಆಡಿದ ಅನುಭವ ನಮಗಿದೆ. ಉಭಯ ತಂಡಗಳೂ ಸೆಮಿಫೈನಲ್ ಗೆಲ್ಲಲು ಉತ್ಸುಕವಾಗಿದೆ. ಆದ್ದರಿಂದ ರೋಚಕ ಹಣಾಹಣಿ ಖಚಿತ’ ಎಂದರು.
ಕರನ್ ಅವರು ಟೂರ್ನಿಯ ಏಳು ಪಂದ್ಯಗಳಿಂದ 149 ರನ್ ಗಳಿಸಿದ್ದಾರೆ ಮತ್ತು ಆರು ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.