
ಆಯುಷ್ ಮ್ಹಾತ್ರೆ
ಬುಲವಾಯೊ: ಆರ್.ಎಸ್.ಅಂಬರೀಶ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಬಳಿಕ ನಾಯಕ ಆಯುಷ್ ಮ್ಹಾತ್ರೆ ಮಿಂಚಿನ ಅರ್ಧಶತಕ ದಾಖಲಿಸಿದರು. ಅವರ ಆಟದ ಬಲದಿಂದ ಭಾರತ ತಂಡವು ಶನಿವಾರ ಯುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಡಿಎಲ್ಎಸ್ ಆಧಾರದಲ್ಲಿ ಏಳು ವಿಕೆಟ್ಗಳಿಂದ ಮಣಿಸಿತು.
ಮಳೆಯಿಂದ ಅಡಚಣೆಯಾದ ಪಂದ್ಯವನ್ನು 37 ಓವರ್ಗಳಿಗೆ ಮೊಟಕುಗೊಳಿಸಲಾಯಿತು. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿ, ಬಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿತು. ಇದೇ 27ರಂದು ಜಿಂಬಾಬ್ವೆ ತಂಡವನ್ನು ಭಾರತ ಎದುರಿಸಲಿದೆ.
ಡಿಎಲ್ಎಸ್ ಆಧಾರದಂತೆ 130 ರನ್ಗಳ ಗುರಿ ಪಡೆದಿದ್ದ ಭಾರತ ತಂಡವು 13.3 ಓವರ್ಗಳಲ್ಲಿ ಗೆಲುವು ಸಾಧಿಸಿತು. ಆರಂಭ ಆಟಗಾರ ಆರನ್ ಜಾರ್ಜ್ (7) ನಿರಾಸೆ ಮೂಡಿಸಿದರು. ಆದರೆ, ವೈಭವ್ ಸೂರ್ಯವಂಶಿ (40;23ಎ) ಮತ್ತು ಆಯುಷ್ (53;27ಎ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿ ಗೆಲುವನ್ನು ತ್ವರಿತಗೊಳಿಸಿದರು.
ಇದಕ್ಕೂ ಮುನ್ನ ಅಂಬರೀಷ್ (29ಕ್ಕೆ 4) ಮತ್ತು ಹೆನಿಲ್ ಪಟೇಲ್ (23ಕ್ಕೆ 3) ದಾಳಿಗೆ ಕಿವೀಸ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕ್ಯಾಲಮ್ ಸ್ಯಾಮ್ಸನ್ (ಔಟಾಗದೇ 37) ಏಕಾಂಗಿ ಹೋರಾಟ ನಡೆಸಿದರು. ಹೀಗಾಗಿ ನ್ಯೂಜಿಲೆಂಡ್ 36.2 ಓವರ್ಗಳಲ್ಲಿ 135 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: 36.2 ಓವರ್ಗಳಲ್ಲಿ 135 (ಕ್ಯಾಲಮ್ ಸ್ಯಾಮ್ಸನ್ ಔಟಾಗದೇ 37; ಆರ್.ಎಸ್. ಅಂಬರೀಷ್ 29ಕ್ಕೆ 4, ಹೆನಿಲ್ ಪಟೇಲ್ 23ಕ್ಕೆ 3). ಭಾರತ: 13.3 ಓವರ್ಗಳಲ್ಲಿ 3 ವಿಕೆಟ್ಗೆ 130 (ವೈಭವ್ ಸೂರ್ಯವಂಶಿ 40, ಆಯುಷ್ ಮ್ಹಾತ್ರೆ 53). ಪಂದ್ಯದ ಆಟಗಾರ: ಆರ್.ಎಸ್. ಅಂಬರೀಷ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.