ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ತಾರಾ ಆಟಗಾರ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾಗೆ ಬಂದಿಳಿಯುತ್ತಿದ್ದಂತೆ ಅಸ್ಪಷ್ಟ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ, ಮಾತ್ರವಲ್ಲ ಅವರ ಅಭಿಮಾನಿಗಳು ಪೋಸ್ಟ್ ಹಿಂದಿನ ಅರ್ಥವನ್ನು ಹುಡುಕುತ್ತಿದ್ದಾರೆ.
ವಿರಾಟ್ ಪೋಸ್ಟ್ನಲ್ಲಿ ಏನಿದೆ?
ವಿರಾಟ್ ಕೊಹ್ಲಿ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ, ‘ನೀವು ಕೈಚೆಲ್ಲಲು ನಿರ್ಧರಿಸಿದ ಸಮಯವೇ ನಿಜವಾಗಿಯೂ ನೀವು ಸೋಲೊಪ್ಪಿಕೊಂಡ ಕ್ಷಣ‘ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟುಹಾಕಿದೆ. ಅವರ ಪೋಸ್ಟ್ ಕುರಿತು ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿಯವರೆ ಸ್ಪಷ್ಟನೆ ನೀಡಿದ್ದಾರೆ.
ವಿರಾಟ್ ಸ್ಪಷ್ಟನೆ ಏನು?
ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಆರಂಭವಾಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿಯವರೆ ಸ್ಪಷ್ಟನೆ ನೀಡಿದ್ದು, ಅದೊಂದು ಖಾಸಗಿ ಜಾಹಿರಾತು ಎಂದು ಜಾಹಿರಾತಿನ ವಿಡಿಯೋ ಜೊತೆಗೆ ‘ಗೆಲುವು ಎಂದಿಗೂ ಕಲಿಸಲಾಗದ್ದನ್ನು ಸೋಲು ಕಲಿಸುತ್ತದೆ‘ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೂ ವಿರಾಟ್ ಅಭಿಮಾನಿಗಳು ಅವರ ನಿಗೂಡ ಹೇಳಿಕೆಯ ಹಿಂದಿನ ಕಾರಣ ಹುಡುಕಲು ಮುಂದಾಗಿದ್ದಾರೆ.
ಟೆಸ್ಟ್ ಹಾಗೂ ಟಿ20 ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ವಿರಾಟ್ ಕೊಹ್ಲಿ, ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ದಿನಗಳ ಬಳಿಕ ಆಸೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಅವರನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.