ADVERTISEMENT

ವಿದೇಶಿ ಆಟಗಾರರನ್ನು ಕಳುಹಿಸಲು ಸೂಕ್ತ ಮಾರ್ಗ ಕಂಡುಕೊಳ್ಳುತ್ತಿದ್ದೇವೆ: ಬ್ರಿಜೇಶ್

ಪಿಟಿಐ
Published 4 ಮೇ 2021, 12:41 IST
Last Updated 4 ಮೇ 2021, 12:41 IST
   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿಭಾಗವಹಿಸಿದ್ದ ವಿದೇಶಿ ಆಟಗಾರರನ್ನು ವಾಪಸು ಕಳುಹಿಸಲು ಸೂಕ್ತ ಮಾರ್ಗ ಕಂಡುಕೊಳ್ಳುತ್ತಿದ್ದೇವೆ ಎಂದು ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.

ವಿವಿಧ ಫ್ರಾಂಚೈಸಿಗಳ ಹಲವು ಆಟಗಾರರಲ್ಲಿ ಕೋವಿಡ್ ಸೋಂಕು ದೃಢಗೊಂಡ ಬೆನ್ನಲ್ಲೇ ತುರ್ತು ಸಭೆ ನಡೆಸಿರುವ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯು, 14ನೇ ಆವೃತ್ತಿಯ ಟೂರ್ನಿಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿಗೆ ಮುಂದೂಡಲು ನಿರ್ಧರಿಸಿತ್ತು.

ಐಪಿಎಲ್ ಬಯೋಬಬಲ್‌ನಲ್ಲಿದ್ದ ಆಟಗಾರರಲ್ಲೂ ಕೋವಿಡ್ ಸೋಂಕು ತಗುಲಿತ್ತು. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್. ಬಾಲಾಜಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ವೃದ್ಧಿಮಾನ್ ಸಹಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಅವರಿಗೆ ಕೋವಿಡ್ ಸೋಂಕು ದೃಢಗೊಂಡಿತ್ತು.

ADVERTISEMENT

ವಿದೇಶಿ ಆಟಗಾರರನ್ನು ನಾವು ಸುರಕ್ಷಿತವಾಗಿ ಮನೆಗೆ ಕಳುಹಿಸಬೇಕಿದೆ. ಅದಕ್ಕೆ ಬೇಕಾದ ಸೂಕ್ತ ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ವ್ಯಾಪಿಸಿರುವುದರಿಂದ ಅನೇಕ ವಿದೇಶಿ ರಾಷ್ಟ್ರಗಳು ಪ್ರಯಾಣಕ್ಕೆ ನಿರ್ಬಂಧ ಹೇರಿವೆ. ಆದರೆ ಆಟಗಾರರನ್ನು ಸುರಕ್ಷಿತ ಕಳುಹಿಸುವ ಭರವಸೆಯನ್ನು ಬಿಸಿಸಿಐ ನೀಡಿತ್ತು. ಅಲ್ಲದೆ ವಿದೇಶಿ ಆಟಗಾರರುಸುರಕ್ಷಿತವಾಗಿ ತಲುಪುವ ವರೆಗೂ ಟೂರ್ನಿ ಮುಗಿಯುದಿಲ್ಲ ಎಂದು ಹೇಳಿತ್ತು.

ಆಸ್ಟ್ರೇಲಿಯಾದ 14, ನ್ಯೂಜಿಲೆಂಡ್‌ನ 10, ಇಂಗ್ಲೆಂಡ್‌ನ 11, ದಕ್ಷಿಣ ಆಫ್ರಿಕಾದ 11, ವೆಸ್ಟ್‌ಇಂಡೀಸ್‌ನ ಒಂಬತ್ತು, ಅಫ್ಗಾನಿಸ್ತಾನದ ಮೂವರು ಮತ್ತು ಬಾಂಗ್ಲಾದೇಶದಇಬ್ಬರು ಆಟಗಾರರು ಐಪಿಎಲ್‌ನ ವಿವಿಧ ಫ್ರಾಂಚೈಸಿಗಳಲ್ಲಿ ಉಳಿದುಕೊಂಡಿದ್ದಾರೆ. ಈ ಮೂದಲು ಟೂರ್ನಿ ಮಧ್ಯೆಯೇ ಆಸ್ಟ್ರೇಲಿಯಾದ ಮೂವರು ಆಟಗಾರರು ಸ್ವದೇಶಕ್ಕೆ ಮರಳಿದ್ದರು.

ಭಾರತ ಪ್ರಯಾಣಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲೇ ಉಳಿದುಕೊಳ್ಳುವಂತಾಗಿದೆ. ಆಸ್ಟ್ರೇಲಿಯಾದ ಆಟಗಾರರು, ತರಬೇತುದಾರರು, ಪಂದ್ಯದ ಅಧಿಕಾರಿಗಳು ಹಾಗೂ ವೀಕ್ಷಕ ವಿವರಣೆಗಾರರನ್ನು ಸುರಕ್ಷಿತವಾಗಿ ಮರಳಿಸುವ ನಿಟ್ಟಿನಲ್ಲಿ ಬಿಸಿಸಿಐ ಜೊತೆಗೆ ಸಂಪರ್ಕದಲ್ಲಿದೆ. ಭಾರತದಲ್ಲಿ ಸೂಕ್ತ ವಸತಿ ಸೌಲಭ್ಯವನ್ನು ಒದಗಿಸುವುದನ್ನು ಖಾತ್ರಿಪಡಿಸಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.