ದುಬೈ: ಮುಂಬರುವ ಟ್ವೆಂಟಿ-20 ಗೆಲ್ಲುವ ಸಲುವಾಗಿ ಸರ್ವ ಪ್ರಯತ್ನವನ್ನು ಮಾಡಲಿದ್ದೇವೆ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್, ಮಗದೊಂದು ವಿಶ್ವಕಪ್ ಗೆಲ್ಲಲು ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡುವುದಾಗಿ ಪ್ರತಿಪಾದಿಸಿದ್ದಾರೆ.
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ರೋಹಿತ್ ಶರ್ಮಾ, ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.
ಟಿ20 ವಿಶ್ವಕಪ್ ಗೆಲುವಿಗೆ 14 ವರ್ಷಗಳ ಸಂಭ್ರಮವನ್ನು ನೆನಪಿಸಿಕೊಂಡಿರುವ ರೋಹಿತ್, 'ಕೋಟ್ಯಂತರ ಅಭಿಮಾನಿಗಳ ಕನಸು ನನಸಾದ ದಿನ. ತುಲನಾತ್ಮಕವಾಗಿ ಅನನುಭವಿ ಹಾಗೂ ನಮ್ಮಂತಹ ಯುವ ತಂಡವು ವಿಶ್ವಕಪ್ ಗೆದ್ದು ಇತಿಹಾಸ ರಚಿಸಲಿದೆ ಎಂದು ಯಾರು ಅಂದುಕೊಂಡಿದ್ದಾರೆ?' ಎಂದು ಬರೆದಿದ್ದಾರೆ.
'ವಿಶ್ವಕಪ್ ಗೆಲುವಿಗೀಗ 14 ವರ್ಷಗಳು ಸಂದಿವೆ. ನಾವು ಬಹಳ ದೂರ ಕ್ರಮಿಸಿದ್ದೇವೆ. ಅನೇಕ ದಾಖಲೆಗಳನ್ನು ನಿರ್ಮಿಸಿದ್ದು, ಅನೇಕ ಹಿನ್ನೆಡೆಯನ್ನು ಅನುಭವಿಸಿದ್ದೇವೆ. ಆದರೂ ನಮ್ಮ ಚೈತನ್ಯ ಕುಗ್ಗಲಿಲ್ಲ. ಯಾಕೆಂದರೆ ನಮ್ಮ ಪ್ರಯತ್ನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದ್ದೇವೆ' ಎಂದು ಉಲ್ಲೇಖಿಸಿದ್ದಾರೆ.
ಬಿಸಿಸಿಐ ಆತಿಥ್ಯ ವಹಿಸುತ್ತಿರುವ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಯುಎಇ ಹಾಗೂ ಒಮಾನ್ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದಾಗಿದೆ.
ವಿಶ್ವಕಪ್ ಬಳಿಕ ಟಿ20 ನಾಯಕತ್ವವನ್ನು ತೊರೆಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ತದಾ ಬಳಿಕ ರೋಹಿತ್ಗೆ ಕಪ್ತಾನಗಿರಿ ಒಲಿಯುವ ಸಾಧ್ಯತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.