ಕೇಪ್ಟೌನ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಸುವರ್ಣಾವಕಾಶವನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾಗೆ ಈಗ ಆತ್ಮಾವಲೋಕನ ಮಾಡುವ ಸಮಯ ಬಂದಿದೆ.
ಈ ನಡುವೆ ತಲಾ ಒಂದು ಇನ್ನಿಂಗ್ಸ್ ಹೊರತುಪಡಿಸಿ ಸರಣಿಯುದ್ಧಕ್ಕೂ ಸತತ ವೈಫಲ್ಯ ಅನುಭವಿಸಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ಎದ್ದಿವೆ. ಇವರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬಂದಿವೆ.
ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, 'ಪೂಜಾರ ಹಾಗೂ ರಹಾನೆ ಭವಿಷ್ಯದ ಕುರಿತು ತಿಳಿದುಕೊಳ್ಳಲು ನೀವು ಆಯ್ಕೆದಾರರಲ್ಲೇ ಮಾತನಾಡಬೇಕು' ಎಂದು ಉತ್ತರಿಸಿದ್ದಾರೆ.
'ಭವಿಷ್ಯದಲ್ಲಿ ಏನಾಗಲಿದೆ ಎಂಬುದರ ಕುರಿತು ನಾನು ಇಲ್ಲಿ ಕುಳಿತು ಮಾತನಾಡಲಾರೆ. ಇಲ್ಲಿ ಕುಳಿತು ಅದನ್ನು ಚರ್ಚಿಸಲು ಸಾಧ್ಯವಿಲ್ಲ. ಬಹುಶಃ ಆಯ್ಕೆದಾರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಅವರೊಂದಿಗೆ ಮಾತನಾಡಬೇಕು. ಇದು ನನ್ನ ಕೆಲಸವಲ್ಲ' ಎಂದು ಪ್ರತಿಕ್ರಿಯಿಸಿದರು.
'ನಾನು ಈ ಮೊದಲೇ ಹೇಳಿದಂತೆ, ಈಗಲೂ ಹೇಳುತ್ತಿದ್ದೇನೆ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಬೆಂಬಲಿಸುತ್ತೇನೆ. ಅವರು ಎಂತಹ ಆಟಗಾರರು ಮತ್ತು ಕಳೆದ ಹಲವಾರು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕಾಗಿ ನೀಡಿದ ಕೊಡುಗೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ನಿರ್ಣಾಯಕ ಇನ್ನಿಂಗ್ಸ್ ಕಟ್ಟಿದರು. ಒಂದು ತಂಡವಾಗಿ ಇಂತಹ ಪ್ರದರ್ಶನಗಳನ್ನು ನಾವು ಗುರುತಿಸುತ್ತೇವೆ. ನಿಸ್ಸಂಶವಾಗಿಯೂ ಆಯ್ಕೆದಾರರು ಏನನ್ನು ನಿರ್ಧರಿಸುತ್ತಾರೋ ಅದನ್ನು ನಾನು ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ' ಎಂದು ಹೇಳಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆವು ಎಂದು ವಿರಾಟ್ ಕೊಹ್ಲಿ ಒಪ್ಪಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.