ADVERTISEMENT

ಆಸ್ಟ್ರೇಲಿಯಾ ಕಾಳ್ಗಿಚ್ಚು: ಯುವರಾಜ್ ಸಿಂಗ್ ಕಳವಳ

ಪಿಟಿಐ
Published 2 ಜನವರಿ 2020, 22:28 IST
Last Updated 2 ಜನವರಿ 2020, 22:28 IST
ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಅವರು ಟ್ವೀಟ್ ಮಾಡಿರುವ ಚಿತ್ರ
ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಅವರು ಟ್ವೀಟ್ ಮಾಡಿರುವ ಚಿತ್ರ   

ನವದೆಹಲಿ: ಹವಾಮಾನ ಬದಲಾವಣೆಯ ಕುರಿತು ಗಂಭೀರವಾಗಿ ಚಿಂತಿಸಿ ಕ್ರಮ ಕೈಗೊಳ್ಳಲು ಇದು ತುರ್ತು ಸಮಯ. ಆಸ್ಟ್ರೇಲಿಯಾದ ಕಾಳ್ಗಿಚ್ಚಿನ ಘಟನೆಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಈಗಾಗಲೇ ಅಪಾರ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದೆ. 4.8 ಕೋಟಿ ಪ್ರಾಣಿಗಳು ಅಸುನೀಗಿವೆ. ಇದು ಹವಾಮಾನ ವೈಪರಿತ್ಯದ ಪರಿಣಾಮವಾಗಿದೆ. ಕೆಲವರು ಮೃತಪಟ್ಟಿದ್ದಾರೆ. ಇದು ಮುನ್ನೆಚ್ಚರಿಕೆ ವಹಿಸಲು ಸೂಕ್ತ ಸಮಯ. ಅಲ್ಲಿಯ ಜನರ ಸುರಕ್ಷತೆಗೆ ಪ್ರಾರ್ಥನೆ ಮಾಡೋಣ’ ಎಂದು ಯುವಿ ಟ್ವೀಟ್‌ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿನಿಂದಾಗಿ 18 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರದಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್‌ ಆರಂಭವಾಗಲಿದೆ. ಆತಿಥೇಯ ತಂಡದ ಆಟಗಾರ ಡೇವಿಡ್ ವಾರ್ನರ್ ಮಾಡಿರುವ ಟ್ವೀಟ್ ಸಂದೇಶವೊಂದು ಎಲ್ಲರ ಗಮನ ಸೆಳೆದಿದೆ.

ADVERTISEMENT

ತನ್ನ ಸಾಕುನಾಯಿಯೊಂದಿಗೆ ಇರುವ ವ್ಯಕ್ತಿಯೊಬ್ಬ ಕಾಳ್ಗಿಚ್ಚನ್ನು ನೋಡುತ್ತ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ವಾರ್ನರ್, ಬೆಂಕಿ ನಂದಿಸಲು ಹೋರಾಡುತ್ತಿರುವ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

‘ನಾಳೆ (ಶುಕ್ರವಾರ) ಪಂದ್ಯವನ್ನು ಆಡಲು ನಮ್ಮ ಹಾಗೂ ನ್ಯೂಜಿಲೆಂಡ್ ತಂಡಗಳ ಆಟಗಾರರು ನಿಮಗೆ ಚಿರ ಋಣಿಯಾಗಿರುತ್ತೇವೆ. ನಿಮ್ಮಂತಹವರ ಸೇವೆಯಿಂದ ನಾವು ಸುರಕ್ಷಿತವಾಗಿದ್ದೇವೆ. ನಾವು, ನಮ್ಮ ಕುಟುಂಬ, ಆತ್ಮೀಯರೆಲ್ಲರೂ ನಿಮಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದು ಬರೆದಿದ್ದಾರೆ.

ಹೋದ ತಿಂಗಳು ಕಾಳ್ಗಿಚ್ಚಿನಿಂದಾಗಿ ಸಿಡ್ನಿಯಲ್ಲಿಯೂ ಆವರಿಸಿದ್ದ ದಟ್ಟವಾದ ಹೊಗೆ ಮತ್ತು ವಾಯುಮಾಲಿನ್ಯದ ಕಾರಣಕ್ಕೆ ಬಿಗ್‌ಬ್ಯಾಷ್ ಲೀಗ್ ಪಂದ್ಯವನ್ನು ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.