ADVERTISEMENT

ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿ: ಕರ್ನಾಟಕಕ್ಕೆ ತಮಿಳುನಾಡು ಸವಾಲು

ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿ: ದಕ್ಷಿಣ ವಲಯ ಅರ್ಹತಾ ಪಂದ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 14:35 IST
Last Updated 22 ನವೆಂಬರ್ 2021, 14:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕರ್ನಾಟಕ ತಂಡವು ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ದಕ್ಷಿಣ ವಲಯ ಅರ್ಹತಾ ಟೂರ್ನಿಯ ಮೊದಲ ಪಂದ್ಯದಲ್ಲಿ ತಮಿಳುನಾಡು ಸವಾಲಿಗೆ ಸಜ್ಜಾಗಿದೆ.

‘ಎ’ ಗುಂಪಿನ ಈ ಪಂದ್ಯವು ಮಂಗಳವಾರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.

ಕಳೆದ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್‌ ತಲುಪಿದ್ದ ಆತಿಥೇಯ ಕರ್ನಾಟಕ, ಈ ಬಾರಿಯೂ ನೆಚ್ಚಿನ ತಂಡವಾಗಿದೆ.

ADVERTISEMENT

ಕೊಯಮತ್ತೂರಿನಲ್ಲಿ ತರಬೇತಿ ಶಿಬಿರ ನಡೆಸಿದ್ದ ತಮಿಳುನಾಡು ತಂಡ ಕೂಡ ಕರ್ನಾಟಕಕ್ಕೆ ಸವಾಲೊಡ್ಡಲು ಸಜ್ಜಾಗಿದೆ.

‘ನಿರಂತರ ಮಳೆಯ ಹೊರತಾಗಿಯೂ ನಮ್ಮ ಶಿಬಿರ ಚೆನ್ನಾಗಿ ನಡೆದಿತ್ತು. ಆಟಗಾರರು ಹೆಚ್ಚಿನ ಉತ್ಸಾಹದಲ್ಲಿದ್ದಾರೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ’ ಎಂದು ತಮಿಳುನಾಡು ತಂಡದ ಕೋಚ್‌ ಎಲ್.ಆರ್.ಟೈಟಸ್ ಹೇಳಿದ್ದಾರೆ.

‘ಬಹಳ ದಿನಗಳಿಂದ ನಮ್ಮ ಆಟಗಾರರು ಒಟ್ಟಾಗಿ ಅಭ್ಯಾಸ ನಡೆಸಿಲ್ಲವಾದರೂ ವಿವಿಧ ಟೂರ್ನಿಗಳಲ್ಲಿ ಆಡುವ ಮೂಲಕ ಅವರು ಫಿಟ್‌ನೆಸ್‌ ಕಾಪಾಡಿಕೊಂಡಿದ್ದಾರೆ. ಅನುಭವಿ ಮತ್ತು ಯುವ ಆಟಗಾರರು ಸಮ್ಮಿಳಿತವಾಗಿರುವ ನಮ್ಮ ತಂಡವು ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದೆ‘ ಎಂದು ಕರ್ನಾಟಕ ತಂಡದ ಕೋಚ್‌ ಬಿಬಿ ಜೋಸೆಫ್‌ ಹೇಳಿದರು.

ಇದೇ ದಿನ ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವಣ ಹಣಾಹಣಿಯೂ ನಡೆಯಲಿದೆ.

ಈ ಗುಂಪಿನಿಂದ ಒಂದು ತಂಡವು ಫೈನಲ್ ಸುತ್ತಿಗೆ ಪ್ರವೇಶಿಸಲಿದೆ.ಸ್ಪೋರ್ಟ್ಸ್‌ಕಾಸ್ಟ್ ಇಂಡಿಯಾ ಯುಟ್ಯೂಬ್ ವಾಹಿನಿಯಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.

ಪಂದ್ಯ ಆರಂಭ: ಬೆಳಿಗ್ಗೆ 11.30, ತೆಲಂಗಾಣ–ಆಂಧ್ರಪ್ರದೇಶ ಪಂದ್ಯ: ಮಧ್ಯಾಹ್ನ 3.30

ದಕ್ಷಿಣ ವಲಯ ಅರ್ಹತಾ ಸುತ್ತು: ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳು

ದಿನಾಂಕ;ಪಂದ್ಯ;ಸಮಯ

ನ.23;ಕರ್ನಾಟಕ–ತಮಿಳುನಾಡು;ಬೆಳಿಗ್ಗೆ 11.30

ನ.23;ತೆಲಂಗಾಣ–ಆಂಧ್ರಪ್ರದೇಶ;ಮಧ್ಯಾಹ್ನ 3.30

ನ.25;ಆಂಧ್ರಪ್ರದೇಶ–ಕರ್ನಾಟಕ;ಬೆಳಿಗ್ಗೆ 11.30

ನ.25;ತಮಿಳುನಾಡು–ತೆಲಂಗಾಣ;ಮಧ್ಯಾಹ್ನ 3.30

ನ.27;ಆಂಧ್ರಪ್ರದೇಶ–ತಮಿಳುನಾಡು;ಬೆಳಿಗ್ಗೆ 11.30

ನ.27;ಕರ್ನಾಟಕ–ತೆಲಂಗಾಣ;ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.