ADVERTISEMENT

ಹಾಕಿ ಗೋಲ್‌ಕೀಪರ್ ಶ್ರೀಜೇಶ್‌ಗೆ ₹1 ಕೋಟಿ ನಗದು ಬಹುಮಾನ ಘೋಷಣೆ

ಪಿಟಿಐ
Published 9 ಆಗಸ್ಟ್ 2021, 9:48 IST
Last Updated 9 ಆಗಸ್ಟ್ 2021, 9:48 IST
ಪಿ.ಆರ್. ಶ್ರೀಜೇಶ್
ಪಿ.ಆರ್. ಶ್ರೀಜೇಶ್   

ತಿರುವನಂತಪುರ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇರಳದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ದುಬೈ ಮೂಲದ ಉದ್ಯಮಿ, ₹1 ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.

ವಿಪಿಎಸ್ ಹೆಲ್ತ್‌ಕೇರ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಸೀರ್ ವಯಲಿಲ್ ಅವರು, ಶ್ರೀಜೇಶ್ ಅವರಿಗೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.

'ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತೀಯ ಹಾಕಿ ಕ್ರೀಡೆಗೆ ಅವರ ಕೊಡುಗೆಯನ್ನು ಗುರುತಿಸಿ ನಗದು ಬಹುಮಾನ ಘೋಷಿಸಲು ಖುಷಿಪಡುತ್ತಿದ್ದೇವೆ' ಎಂದು ದುಬೈಯಲ್ಲಿ ನೆಲೆಸಿರುವ ಕೇರಳ ಮೂಲದ ಉದ್ಯಮಿ ತಿಳಿಸಿದ್ದಾರೆ.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳಿಂದ ಗೆಲುವು ದಾಖಲಿಸಿದ ಭಾರತದ ಹಾಕಿ ತಂಡವು 41 ವರ್ಷಗಳ ಬಳಿಕ ಪದಕ ಜಯಿಸಿತ್ತು.

ತಡೆಗೋಡೆ ಖ್ಯಾತಿಯ ಶ್ರೀಜೇಶ್, ನಿರ್ಣಾಯಕ ಹಂತದಲ್ಲಿ ಅನೇಕ ಗೋಲುಗಳನ್ನು ತಡೆದಿದ್ದರು. ಜರ್ಮನಿ ವಿರುದ್ಧದ ಪಂದ್ಯದಲ್ಲೂ ಪಂದ್ಯ ಕೊನೆಗೊಳ್ಳಲು ಕೇವಲ ಆರು ಸೆಕೆಂಡುಗಳು ಮಾತ್ರ ಬಾಕಿ ಇರುವಾಗ ಅದ್ಭುತ ಸೇವ್ ಮಾಡಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.