ADVERTISEMENT

ವಿಮಾನ ರದ್ದು: ವಿಶ್ವ ರಿಲೆಗೆ ಭಾರತ ತಂಡವಿಲ್ಲ

ಪಿಟಿಐ
Published 28 ಏಪ್ರಿಲ್ 2021, 15:15 IST
Last Updated 28 ಏಪ್ರಿಲ್ 2021, 15:15 IST
ದ್ಯುತಿ ಚಾಂದ್ –ಎಎಫ್‌ಪಿ ಚಿತ್ರ
ದ್ಯುತಿ ಚಾಂದ್ –ಎಎಫ್‌ಪಿ ಚಿತ್ರ   

ನವದೆಹಲಿ: ವಿಮಾನಯಾನ ಸೌಲಭ್ಯದ ಕೊರತೆಯಿಂದಾಗಿ ಭಾರತ ಅಥ್ಲೀಟ್‌ಗಳ ತಂಡದ ಪೋಲೆಂಡ್ ಪ್ರವಾಸ ರದ್ದುಗೊಂಡಿದೆ. ಹಿಮಾ ದಾಸ್ ಮತ್ತು ದ್ಯುತಿ ಚಾಂದ್ ಅವರನ್ನು ಒಳಗೊಂಡ ತಂಡ ಮುಂದಿನ ತಿಂಗಳಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತೆಗಾಗಿರುವ ವಿಶ್ವ ರಿಲೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಕೋವಿಡ್‌ನಿಂದಾಗಿ ವಿಮಾನ ರದ್ದುಗೊಂಡ ಕಾರಣ ತಂಡದ ಆಸೆಗೆ ತಣ್ಣೀರು ಬಿದ್ದಿದೆ.

ಮೇ ಒಂದು ಮತ್ತು ಎರಡರಂದು ನಡೆಯಲಿರುವ ರಿಲೆಗೆ ಮಹಿಳೆಯರ 4x100 ಮೀಟರ್ಸ್ ಮತ್ತು ಪುರುಷರ 4x400 ಮೀಟರ್ಸ್ ತಂಡ ಗುರುವಾರ ಮುಂಜಾನೆ ಆಮ್‌ಸ್ಟರ್‌ಡ್ಯಾಂಗೆ ತೆರಳುವ ವಿಮಾನವೇರಬೇಕಾಗಿತ್ತು. ಆದರೆ ಭಾರತದಿಂದ ತೆರಳುವ ಮತ್ತು ಭಾರತಕ್ಕೆ ಬರುವ ಎಲ್ಲ ವಿಮಾನಗಳನ್ನು ಡಚ್ ಸರ್ಕಾರ ಸೋಮವಾರವೇ ರದ್ದುಗೊಳಿಸಿದ ಕಾರಣ ತೊಂದರೆಯಾಗಿತ್ತು.

ಪೋಲೆಂಡ್‌ನ ಸಿಲೇಸ್ಯಾ ತಲುಪಲು ಅನುಕೂಲವಾಗುಂತೆ ಯುರೋಪ್‌ನ ಯಾವುದಾದರೂ ನಗರಕ್ಕೆ ತೆರಳುವ ವಿಮಾನಕ್ಕಾಗಿ ಭಾರತ ಅಥ್ಲೆಟಿಕ್ ಫೆಡರೇಷನ್ ಪ್ರಯತ್ನಿಸಿತು. ಆದರೆ ಅದಕ್ಕೆ ಫಲ ಸಿಗಲಿಲ್ಲ.

ADVERTISEMENT

ಕಳೆದ ತಿಂಗಳಲ್ಲಿ ನಡೆದ ಫೆಡರೇಷನ್ ಕಪ್‌ನ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್ ಅವರನ್ನು ಹಿಂದಿಕ್ಕಿದ್ದ ಎಸ್‌.ಧನಲಕ್ಷ್ಮಿ ಮಹಿಳೆಯರ ತಂಡದಲ್ಲಿದ್ದಾರೆ. ಅರ್ಚನ ಸುಸೀಂದ್ರನ್‌, ಹಿಮಶ್ರೀ ರಾಯ್ ಮತ್ತು ಎಟಿ ದಾನೇಶ್ವರಿ ಅವರೂ ಆಯ್ಕೆಯಾಗಿದ್ದಾರೆ.

ಪುರುಷರ ತಂಡದಲ್ಲಿ ಮುಹಮ್ಮದ್ ಅನಾಸ್ ಯಾಹಿಯಾ, ಆರೋಗ್ಯ ರಾಜೀವ್‌, ಅಮೊಜ್ ಜೇಕಬ್‌, ನಿರ್ಮಲ್ ನೋಹ್ ಟಾಮ್ ಮತ್ತು ಸಾರ್ಥಕ್ ಭಾಂಬ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.