ಭದ್ರತಾ ಪಡೆ
(ಪಿಟಿಐ ಚಿತ್ರ)
ನವದೆಹಲಿ: ಪಹಲ್ಗಾಮ್ನಲ್ಲಿ ಉಗ್ರರ ದುಷ್ಕೃತ್ಯವನ್ನು ದೇಶದ ಕ್ರೀಡಾಕ್ಷೇತ್ರದ ದಿಗ್ಗಜರು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್, ಅವರು ಭಯೋತ್ಪಾದಕರ ಮೃಗೀಯ ದಾಳಿ ಖಂಡಿಸಿ, ಸಾಮಾಜಿಕ ಜಾಲತಾಣದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
‘ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಗುರಿಪಡಿಸುವುದು ಮತ್ತು ಕೊಲ್ಲುವುದು ಹೇಯ ಕೃತ್ಯ. ಯಾವುದೇ ನಂಬಿಕೆ, ಸಿದ್ಧಾಂತವು ಇಂಥ ರಾಕ್ಷಸಿ ಕೃತ್ಯವನ್ನು ಸಮರ್ಥಿಸುವುದಿಲ್ಲ. ಮನುಷ್ಯ ಜೀವಕ್ಕೆ ಬೆಲೆಯನ್ನೇ ನೀಡದ ಇದೆಂಥ ಹೋರಾಟ’ ಎಂದು ವೇಗಿ ಮೊಹಮ್ಮದ್ ಸಿರಾಜ್ ಭಾವನಾತ್ಮಕವಾಗಿ ಬರೆದಿದ್ದಾರೆ.
ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರವಿಶಾಸ್ತ್ರಿ ಕೂಡ ದಾಳಿಯನ್ನು ಖಂಡಿಸಿದ್ದಾರೆ.
ಕ್ರೀಡಾಸಂಬಂಧ ಕೊನೆಗೊಳಿಸಿ:
ಭಾರತದ ಮಾಜಿ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ ಕೂಡ ದಾಳಿಯನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನದ ಜೊತೆ ಎಲ್ಲಾ ರೀತಿಯ ಕ್ರೀಡಾ ಸಂಬಂಧಗಳನ್ನು ಕೊನೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಒಲಿಂಪಿಕ್ಸ್ ಬಾಕ್ಸಿಂಗ್ ಪದಕ ವಿಜೇತ ವಿಜೇಂದರ್ ಸಿಂಗ್, ಕ್ರಿಕೆಟಿಗ ಗೌತಮ್ ಗಂಭೀರ್, ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಒಲಿಂಪಿಕ್ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಜಾವೆಲಿನ್ ತಾರೆ ನೀರಜ್ ಚೋಪ್ರಾ, ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರೂ ಉಗ್ರರ ಕೃತ್ಯವನ್ನು ಖಂಡಿಸಿದ್ದಾರೆ.
‘ಬರೇ ಖಂಡನೆಯಷ್ಟೇ ಸಾಲದು. ನ್ಯಾಯವೂ ದೊರಕಬೇಕು. ಪ್ರಾಣ ಕಳೆದುಕೊಂಡವರಿಗೆ ನಮ್ಮ ಹೃದಯ ಮಿಡಿಯುತ್ತಿದೆ. ಉಗ್ರ ಕೃತ್ಯ ಗೆಲ್ಲಲು ಅವಕಾಶ ನೀಡಬಾರದು’ ಎಂದು ಶ್ರೀಜೇಶ್ ಜಾಲತಾಣದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.