
ನವದೆಹಲಿ: ಭಾರತ ಪುರುಷರ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಅವರನ್ನು ಈ ವರ್ಷದ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ಡೆಕಾಥ್ಲಾನ್ ಅಥ್ಲೀಟ್ ತೇಜಸ್ವಿನ್ ಶಂಕರ್ ಸೇರಿದಂತೆ 24 ಸಾಧಕರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಕ್ರೀಡಾ ಅತ್ಯುತ್ತಮ ಪ್ರಶಸ್ತಿಯಾದ ಖೇಲ್ ರತ್ನ ಗೌರವಕ್ಕೆ 27 ವರ್ಷದ ಹಾರ್ದಿಕ್ ಅವರನ್ನು ಮಾತ್ರ ಶಿಫಾರಸು ಮಾಡಲಾಗಿದೆ. ಬುಧವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ತಂಡದಲ್ಲಿ ಮಿಡ್ಫೀಲ್ಡರ್ ಆಗಿರುವ ಹಾರ್ದಿಕ್ 2021ರ ಟೋಕಿಯೊ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಅವರಿದ್ದರು. ಈ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತ ತಂಡದ ಭಾಗವಾಗಿದ್ದರು.
ಯೋಗಾಸನ ಕ್ರೀಡಾಪಟು ಆರತಿ ಪಾಲ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಯೋಗಾಸನವನ್ನು ಕ್ರೀಡಾ ಸಚಿವಾಲಯವು ಅಧಿಕೃತವಾಗಿ ಗುರುತಿಸಿದ ಐದು ವರ್ಷಗಳ ನಂತರ ಮೊದಲ ಬಾರಿ ಈ ಕ್ರೀಡೆಗೆ ಗೌರವ ಲಭಿಸಿದೆ. ಆರತಿ ಅವರು ಪ್ರಸ್ತುತ ರಾಷ್ಟ್ರೀಯ ಮತ್ತು ಏಷ್ಯನ್ ಚಾಂಪಿಯನ್ ಆಗಿದ್ದಾರೆ. 2026ರ ಏಷ್ಯನ್ ಗೇಮ್ಸ್ನಲ್ಲಿ ಯೋಗಾಸನ ಪ್ರದರ್ಶನ ಕ್ರೀಡೆಯಾಗಿರಲಿದೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಭಾರತ ಒಲಿಂಪಿಕ್ ಸಂಸ್ಥೆ ಉಪಾಧ್ಯಕ್ಷ ಗಗನ್ ನಾರಂಗ್, ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಅಪರ್ಣಾ ಪೋಪಟ್ ಮತ್ತು ಹಾಕಿ ಮಾಜಿ ಆಟಗಾರ ಎಂ.ಎಂ. ಸೋಮಯ ಇದ್ದರು. ಖೇಲ್ ರತ್ನ ಪ್ರಶಸ್ತಿಯು ₹25 ಲಕ್ಷ ಮತ್ತು ಅರ್ಜುನ ಪ್ರಶಸ್ತಿಯು ₹ 15 ಲಕ್ಷ ನಗದು ಬಹುಮಾನ ಒಳಗೊಂಡಿದೆ.
ಶಿಫಾರಸು ಪಟ್ಟಿ
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಹಾರ್ದಿಕ್ ಸಿಂಗ್ (ಹಾಕಿ)
ಅರ್ಜುನ ಪ್ರಶಸ್ತಿ
ತೇಜಸ್ವಿನ್ ಶಂಕರ್, ಪ್ರಿಯಾಂಕಾ, ಮೊಹಮ್ಮದ್ ಅಫ್ಸಲ್ (ಮೂವರೂ ಅಥ್ಲೆಟಿಕ್ಸ್), ನರೇಂದರ್ (ಬಾಕ್ಸಿಂಗ್), ವಿದಿತ್ ಗುಜರಾತಿ, ದಿವ್ಯಾ ದೇಶಮುಖ್ (ಇಬ್ಬರೂ ಚೆಸ್), ಧನುಷ್ ಶ್ರೀಕಾಂತ್ (ಶ್ರವಣದೋಷವುಳ್ಳವರ ಶೂಟಿಂಗ್), ಪ್ರಣತಿ ನಾಯಕ್ (ಜಿಮ್ನಾಸ್ಟಿಕ್ಸ್), ರಾಜ್ಕುಮಾರ್ ಪಾಲ್ (ಹಾಕಿ), ಸುರ್ಜಿತ್ (ಕಬಡ್ಡಿ), ನಿರ್ಮಲಾ ಭಾಟಿ (ಕೊಕ್ಕೊ), ರುದ್ರಾಂಶ್ ಖಂಡೇಲ್ವಾಲ್ (ಪ್ಯಾರಾ ಶೂಟಿಂಗ್), ಏಕ್ತಾ ಭಯ್ (ಪ್ಯಾರಾ ಅಥ್ಲೆಟಿಕ್ಸ್), ಪದ್ಮನಾಭ್ ಸಿಂಗ್ (ಪೋಲೊ), ಅರವಿಂದ್ ಸಿಂಗ್ (ರೋಯಿಂಗ್), ಅಖಿಲ್ ಶೆರಾನ್ , ಮೆಹುಲಿ ಘೋಷ್ (ಇಬ್ಬರೂ ಶೂಟಿಂಗ್), ಸುತೀರ್ಥ ಮುಖರ್ಜಿ (ಟೇಬಲ್ ಟೆನಿಸ್), ಸೋನಮ್ ಮಲಿಕ್ (ಕುಸ್ತಿ), ಆರತಿ (ಯೋಗ), ಟ್ರೀಸಾ ಜೋಳಿ, ಗಾಯತ್ರಿ ಗೋಪಿಚಂದ್ (ಇಬ್ಬರೂ ಬ್ಯಾಡ್ಮಿಂಟನ್), ಲಾಲ್ರೆಮ್ಸಿಯಾಮಿ (ಹಾಕಿ), ಪೂಜಾ (ಕಬಡ್ಡಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.