
ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕೊಕ್ಕೊ ಚಾಂಪಿಯನ್ಷಿಪ್ನ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಹಾಗೂ ಪುರುಷರ ವಿಭಾಗದಲ್ಲಿ ಕೇರಳ ತಂಡಗಳು ಗೆಲುವು ಸಾಧಿಸಿದವು.
3 ದಿನಗಳಿಂದ ನಡೆದ ಕೊಕ್ಕೊ ಚಾಂಪಿಯನ್ಷಿಪ್ನ ಫೈನಲ್ ಪಂದ್ಯಗಳು ಭಾನುವಾರ ರೋಚಕ ಕ್ಷಣಗಳಿಗೆ ಸಾಕ್ಷಿಯಾದವು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಕರ್ನಾಟಕದ ಮಹಿಳಾ ತಂಡ 5 ಪಂದ್ಯಗಳಲ್ಲಿ ಜಯಶಾಲಿಯಾಗಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು. 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕರ್ನಾಟಕ ಪುರುಷರ ತಂಡವು ಕೇರಳದ ಎದುರು ಸೋತು ರನ್ನರ್ಅಪ್ ಆಯಿತು.
ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಹಿಡಿತ ಸಾಧಿಸಿದ ಕರ್ನಾಟಕ ಮಹಿಳಾ ತಂಡವು ಕೇರಳ ತಂಡವನ್ನು 36-10ರಿಂದ ಮಣಿಸಿತು. ಪುರುಷರ ವಿಭಾಗದಲ್ಲಿ ಕೇರಳ ತಂಡಕ್ಕೆ ಪೈಪೋಟಿ ಒಡ್ಡಿದ ಕರ್ನಾಟಕದ ಆಟಗಾರರು ಅಂತಿಮ ಹಂತದಲ್ಲಿ ಮುಗ್ಗರಿಸಿದರು. ಕೇರಳ ತಂಡವು ಕರ್ನಾಟಕವನ್ನು 30- 27ರಿಂದ ಮಣಿಸಿತು.
ಉತ್ತಮ ಪ್ರದರ್ಶನಕ್ಕಾಗಿ ಕರ್ನಾಟಕದ ಬಿ.ಚೈತ್ರಾ ‘ಒನಕೆ ಓಬವ್ವ ಪ್ರಶಸ್ತಿ’ಗೆ ಹಾಗೂ ಕೇರಳದ ಬಿಚ್ಚು ಅವರು ‘ವೀರ ಮದಕರಿ ನಾಯಕ’ ಗೌರವಕ್ಕೆ ಪಾತ್ರರಾದರು. ಆಂಧ್ರಪ್ರದೇಶದ ಕುಮಾರಿ, ತೆಲಂಗಾಣದ ಜಿ.ದಿನೇಶ್ ಉತ್ತಮ ಡಿಫೆಂಡರ್, ತಮಿಳುನಾಡಿನ ಜಯಶ್ರೀ, ಆಂಧ್ರಪ್ರದೇಶದ ಮಾರಿಶೆಟ್ಟಿ ಉತ್ತಮ ಅಟ್ಯಾಕರ್, ಕರ್ನಾಟಕ ದಿತ್ಯಾ ಪಾಟೀಲ್, ಕೇರಳದ ಕಾವ್ಯಾ ಕೃಷ್ಣ ಉತ್ತಮ ಆಲ್ರೌಂಡರ್ ಹಾಗೂ ತಮಿಳುನಾಡಿನ ಜೆ.ಅಲ್ಲೆನ್ಸ್, ಕರ್ನಾಟಕದ ಮಾನ್ಯಾ ಭರವಸೆಯ ಆಟಗಾರರಾಗಿ ಹೊರಹೊಮ್ಮಿದರು.