ನವದೆಹಲಿ: ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ಲಿಫ್ಟರ್ ಬಿಂದ್ಯಾರಾಣಿ ದೇವಿ ಅವರನ್ನುರಾಷ್ಟ್ರಪತಿದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.
‘ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಬಿಂದ್ಯಾರಾಣಿ ದೇವಿ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ಸದೃಢತೆಯ ದ್ಯೋತಕವಾಗಿದೆ. ಅವರ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ತುಂಬಾ ಸಂತಸ ತರಿಸಿದೆ. ಬಿಂದ್ಯಾರಾಣಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲೆಂದು ನಾನು ಶುಭ ಹಾರೈಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಶನಿವಾರ ನಡೆದ ಮಹಿಳೆಯರ ವೇಟ್ಲಿಫ್ಟಿಂಗ್ನ 55 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 202 ಕೆ.ಜಿ (86 ಕೆ.ಜಿ+ 116 ಕೆ.ಜಿ) ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದರು. ಸಿಡಬ್ಲ್ಯುಜಿಯಲ್ಲಿ ಬಿಂದ್ಯಾರಾಣಿ ತೋರಿದ ಶ್ರೇಷ್ಠ ಸಾಧನೆ ಇದಾಗಿದೆ.
ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು ಒಟ್ಟು 203 ಕೆಜಿ (92 ಕೆಜಿ + 111 ಕೆಜಿ) ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದರು.
ಸ್ಥಳೀಯ ಪ್ರತಿಭೆ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ (86 ಕೆಜಿ+109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
ಇದಕ್ಕೂ ಮುನ್ನ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಒದಗಿಸಿದರು. ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.