ADVERTISEMENT

ಫೈನಲ್‌ಗೆ ಪ್ರತಿಮಾ, ವೀರಸಾಮಿ

ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:35 IST
Last Updated 5 ಮಾರ್ಚ್ 2021, 15:35 IST
 ಪ್ರತಿಮಾ ರಾವ್ -ಸಂಗ್ರಹ ಚಿತ್ರ
 ಪ್ರತಿಮಾ ರಾವ್ -ಸಂಗ್ರಹ ಚಿತ್ರ   

ಬೆಂಗಳೂರು: ಅಮೋಘ ಆಟವಾಡಿದ ಅಗ್ರಶ್ರೇಯಾಂಕದ ಆಟಗಾರ್ತಿ ಕರ್ನಾಟಕದ ಪ್ರತಿಮಾ ರಾವ್‌ ಹಾಗೂ ಎರಡನೇ ಶ್ರೇಯಾಂಕಿತ ವೀರಸಾಮಿ ಶೇಖರ್‌ ಅವರು ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್‌ ಟೂರ್ನಿಯ ಫೈನಲ್‌ಗೆ ಕಾಲಿಟ್ಟರು.

ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿ) ಅಂಗಳದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪ್ರತಿಮಾ ಅವರು 6–4, 6–1ರಿಂದ ಕರ್ನಾಟಕದ ನಳಿನಾ ಕುಮಾರಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ರಾಜ್ಯದ ಕೆ.ಪಿ.ಶಿಲ್ಪಾ 6-0, 6-0ಯಿಂದ ಎ.ಸುಧಾ ಎದುರು ಗೆದ್ದು ಪ್ರಶಸ್ತಿ ಸುತ್ತು ತಲುಪಿದರು.

ಪುರುಷ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ವೀರಸಾಮಿ 6-3, 6-0ರಿಂದ ಮೂರನೇ ಶ್ರೇಯಾಂಕದ ತಮಿಳುನಾಡು ಆಟಗಾರ ಕರುಣಾಕರನ್‌ ಕಾರ್ತಿಕ್‌ ಸವಾಲು ಮೀರಿದರು. ಪ್ರಶಸ್ತಿಗಾಗಿ ಅವರು ನಾಲ್ಕನೇ ಶ್ರೇಯಾಂಕದ, ತಮಿಳುನಾಡಿನ ಸುಬ್ರಮಣ್ಯನ್ ಬಾಲಚಂದ್ರ ಅವರೊಂದಿಗೆ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಸುಬ್ರಮಣ್ಯನ್ 6-1, 6-2ರಿಂದ ತಮ್ಮದೇ ರಾಜ್ಯದ ದುರೈ ಮರಿಯಪ್ಪನ್ ಅವರನ್ನು ಮಣಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.