ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಚಕ ಫೈನಲ್ ಮುಖಾಮುಖಿಯಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಕುವೈತ್ ವಿರುದ್ಧ 5-4 ಗೋಲುಗಳ ಅಂತರದ ಜಯ ಸಾಧಿಸಿರುವ ಭಾರತ ದಾಖಲೆಯ ಒಂಬತ್ತನೇ ಬಾರಿಗೆ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ ಎತ್ತಿ ಹಿಡಿದಿದೆ.
ವಿಜಯೋತ್ಸವದ ವೇಳೆ ಭಾರತೀಯ ಆಟಗಾರ ಜಾಕ್ಸನ್ ಸಿಂಗ್, ಮಣಿಪುರದ ಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಸ್ವತಃ ಮಿಡ್ ಫೀಲ್ಡರ್ ಆಟಗಾರ ಜಾಕ್ಸನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರೀತಿಯ ಅಭಿಮಾನಿಗಳೇ, 'ಮಣಿಪುರದ ಧ್ವಜ ಹಿಡಿಯುವ ಮೂಲಕ ನಾನು ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಬಯಸುವುದಿಲ್ಲ. ನನ್ನ ತವರು ರಾಜ್ಯ ಮಣಿಪುರ ಸದ್ಯ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಗಮನ ಸೆಳೆಯುವುದಷ್ಟೇ ನನ್ನ ಇರಾದೆಯಾಗಿತ್ತು. ಇಂದಿನ ಗೆಲುವು ಇಡೀ ದೇಶಕ್ಕೆ ಸಮರ್ಪಿತವಾಗಿದೆ' ಎಂದು ತಿಳಿಸಿದ್ದಾರೆ.
'ನನ್ನ ತವರು ರಾಜ್ಯವಾದ ಮಣಿಪುರದಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸುತ್ತೇನೆ. ಇಂದು ಇಲ್ಲಿಗೆ ಬಂದು ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳು' ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
22 ವರ್ಷದ ಮಣಿಪುರದ ಆಟಗಾರ ಜಾಕ್ಸನ್ ಸಿಂಗ್, ಸ್ಯಾಫ್ ಹಾಗೂ ಇಂಟರ್ ಕಾಂಟಿನೆಂಟಲ್ ಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.