ನವದೆಹಲಿ: ಒಲಿಂಪಿಕ್ಸ್ಗೆ ತೆರಳಲಿರುವ ಭಾರತದ ಅಥ್ಲೀಟ್ಗಳ ಮೇಲೆ ಜಪಾನ್ ಸರ್ಕಾರ ಸಿದ್ಧಪಡಿಸಿರುವ ಹೆಚ್ಚುವರಿ ನಿಯಮಗಳ ಕುರಿತು ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ತಾರತಮ್ಯ ಸಾಧ್ಯವಿಲ್ಲ‘ ಎಂದಿದ್ದಾರೆ. ಅಲ್ಲದೆ ಈ ಕುರಿತು ಔಪಚಾರಿಕ ದೂರು ಸಲ್ಲಿಸಿದ್ದು, ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಭಾರತ ಒಳಗೊಂಡಂತೆ ಇತ್ತೀಚೆಗೆ ಕೋವಿಡ್–19ರ ವಿವಿಧ ರೂಪಾಂತರಿತ ವೈರಸ್ಗಳು ಕಂಡುಬಂದ 11 ದೇಶಗಳಿಂದ ತೆರಳುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿ ಕಠಿಣ ನಿಯಮಾವಳಿಗಳನ್ನು ಜಪಾನ್ ಸರ್ಕಾರ ಸಿದ್ಧಪಡಿಸಿದೆ.
ಟೋಕಿಯೊಗೆ ತೆರಳುವ ಮುನ್ನ ಒಂದು ವಾರ ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದೂ ಟೋಕಿಯೊಗೆ ತಲುಪಿದ ನಂತರ ಮೂರು ದಿನ ಬೇರೆ ದೇಶದ ಯಾರೊಂದಿಗೂ ಮಾತನಾಡಬಾರದು ಎಂದು ಭಾರತದ ಪ್ರತಿನಿಧಿಗಳಿಗೆ ಜಪಾನ್ ಸರ್ಕಾರ ಸೂಚಿಸಿತ್ತು. ಇದಕ್ಕೆ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಅಸಮಾಧಾನ ವ್ಯಕ್ತಪಡಿಸಿತ್ತು. ಇದು ತಾರತಮ್ಯ ನೀತಿ; ಅನ್ಯಾಯ ಎಂದು ಕಿಡಿ ಕಾರಿತ್ತು.
‘ಒಲಿಂಪಿಕ್ ಕಾಯ್ದೆಯ ಪ್ರಕಾರ ಯಾವುದೇ ದೇಶದೊಂದಿಗೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಅಂತಹ ಸಮಸ್ಯೆಗಳಿದ್ದರೂ ಪರಿಹರಿಸಲಾಗುವುದು‘ ಎಂದು ಮಾಧ್ಯಮಗಳೊಂದಿಗೆ ನಡೆಸಿದ ಆನ್ಲೈನ್ ಸಂವಾದದಲ್ಲಿ ರಿಜಿಜು ತಿಳಿಸಿದ್ದಾರೆ.
ಒಲಿಂಪಿಕ್ಸ್ಗೆ ಅಥ್ಲೀಟ್ಗಳ ಸಿದ್ಧತೆ ಕುರಿತು ಅವರು ತೃಪ್ತಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.