ADVERTISEMENT

ರಾಜಿ ಮಾಡಿಕೊಳ್ಳುವಂತೆ ಒತ್ತಡ, ನಮ್ಮ ನೋವು ಯಾರಿಗೂ ಅರ್ಥವಾಗುತ್ತಿಲ್ಲ: ಸಾಕ್ಷಿ ಮಲಿಕ್

ಪಿಟಿಐ
Published 10 ಜೂನ್ 2023, 13:25 IST
Last Updated 10 ಜೂನ್ 2023, 13:25 IST
 ಬಜರಂಗ್‌ ಪುನಿಯಾ ಹಾಗೂ ಸಾಕ್ಷಿ ಮಲಿಕ್‌
ಬಜರಂಗ್‌ ಪುನಿಯಾ ಹಾಗೂ ಸಾಕ್ಷಿ ಮಲಿಕ್‌    ಪಿಟಿಐ ಚಿತ್ರ

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ನಾವು ಪ್ರತಿನಿತ್ಯ ಮಾನಸಿಕವಾಗಿ ಅನುಭವಿಸುತ್ತಿರುವ ನೋವನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಒಲಿಂಪಿಕ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ಬೇಸರ ವ್ಯಕ್ತಪಡಿಸಿದ್ದಾರೆ.

'ರಾಜಿ ಮಾಡಿಕೊಳ್ಳುವಂತೆ ನಮಗೆ ತೀವ್ರ ಒತ್ತಡ ಹೇರಲಾಗುತ್ತಿದೆ' ಎಂದು ಹೇಳಿರುವ ಸಾಕ್ಷಿ, ಬ್ರಿಜ್‌ ಭೂಷಣ್‌ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವವರು ನಮಗೆ ಕರೆ ಮಾಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಜೂನ್‌ 15ರ ವರೆಗೆ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇದೀಗ ತಮ್ಮ ಮುಂದಿನ ನಡೆ ಕುರಿತು ಚರ್ಚಿಸಲು ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಸೋನಿಪತ್‌ಗೆ ಆಗಮಿಸಿರುವ ಸಾಕ್ಷಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ADVERTISEMENT

ಬ್ರಿಜ್‌ ಭೂಷಣ್‌ ವಿರುದ್ಧ ದೂರು ನೀಡಿರುವ ಬಾಲಕಿಯ ತಂದೆಗೆ, ದೂರು ವಾಪಸ್‌ ಪಡೆಯುವಂತೆ ತೀವ್ರ ಒತ್ತಡ ಹಾಕಲಾಗುತ್ತಿದೆ. ಇದರಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಸಮಸ್ಯೆ ಸಂಪೂರ್ಣವಾಗಿ ಇತ್ಯರ್ಥವಾದಿದ್ದರೆ, ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸಾಕ್ಷಿ, ಕುಸ್ತಿಪಟುಗಳು ಪ್ರತಿನಿತ್ಯ ಮಾನಸಿಕವಾಗಿ ಅನುಭವಿಸುತ್ತಿರುವ ನೋವನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

'ಎಲ್ಲ ಸಮಸ್ಯೆಗಳು ಬಗೆಹರಿದ ನಂತರವಷ್ಟೇ ನಾವು ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತೇವೆ. ನಾವು ಮಾನಸಿಕವಾಗಿ ಹೇಗೆ ಬಳಲುತ್ತಿದ್ದೇವೆ ಮತ್ತು ನಿತ್ಯ ಎಷ್ಟು ನೋವು ಅನುಭವಿಸುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ' ಎಂದು ಹೇಳಿದ್ದಾರೆ.

ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕುಸ್ತಿಪಟುಗಳಿಗೆ ಈ ತಿಂಗಳ ಕೊನೆಯಲ್ಲಿ ಟ್ರಯಲ್ಸ್‌ ನಿಗದಿಯಾಗಿದೆ. ಧರಣಿಯಲ್ಲಿ ಭಾಗಿಯಾಗಿರುವವರೂ ಸೇರಿದಂತೆ ಎಲ್ಲ ಕುಸ್ತಿಪಟುಗಳು ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬೇಕಿದೆ.

ಏಷ್ಯನ್‌ ಕ್ರೀಡಾಕೂಟ ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ 23 ರಿಂದ ಅಕ್ಟೋಬರ್‌ 8ರವರೆಗೆ ನಡೆಯಲಿದೆ.

ಏಳು ಮಂದಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್ ಬಂಧನಕ್ಕೆ ಒತ್ತಾಯಿಸಿ ವಿನೇಶಾ ಫೋಗಟ್‌, ಬಜರಂಗ್‌ ಪುನಿಯಾ, ಸಾಕ್ಷಿ ಮಲಿಕ್‌ ಹಾಗೂ ಮತ್ತಿತರರು ದೆಹಲಿಯ ಜಂತರ್‌ ಮಂಥರ್‌ನಲ್ಲಿ ಹೋರಾಟದಲ್ಲಿ ಭಾಗಿಯಾದ್ದರು.

ಕುಸ್ತಿಪಟುಗಳೊಂದಿಗೆ ಬುಧವಾರ (ಜೂನ್‌ 07) ಮಾತುಕತೆ ನಡೆಸಿದ್ದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಡಬ್ಲ್ಯುಎಫ್‌ಐ ಅಧ್ಯಕ್ಷ ಸಿಂಗ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಕುಸ್ತಿಪಟುಗಳು ಜೂನ್‌ 15ರವರೆಗೆ ತಮ್ಮ ಹೋರಾಟ ನಿಲ್ಲಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.