
ಡೇವಿಸ್ ಕಪ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ದಕ್ಷಿಣೇಶ್ವರ ಸುರೇಶ್ ಫೋರ್ಹ್ಯಾಂಡ್ ಹೊಡೆತ ಆಡಿದ್ದು ಹೀಗೆ....
ಪ್ರಜಾವಾಣಿ ಚಿತ್ರ: ಪಿ.ಎಸ್.ಕೃಷ್ಣಕುಮಾರ್
ಬೆಂಗಳೂರು: ಸಂದರ್ಭೋಚಿತ ವಾಗಿ ಆಡಿದ ಯುವ ತಾರೆ ದಕ್ಷಿಣೇಶ್ವರ ಸುರೇಶ್ ಅವರು ಎರಡನೇ ಸಿಂಗಲ್ಸ್ನಲ್ಲಿ ನೆದರ್ಲೆಂಡ್ಸ್ನ ಅಗ್ರ ಆಟಗಾರ ಜೆಸ್ಪರ್ ಡಿ ಜಾಂಗ್ ಅವರನ್ನು ಸೋಲಿಸಿದರು. ಇದರೊಂದಿಗೆ ಭಾರತ ತಂಡ ಶನಿವಾರ ಆರಂಭವಾದ ಡೇವಿಸ್ ಕಪ್ ಟೆನಿಸ್ ಕ್ವಾಲಿಫೈಯರ್ಸ್ ಸುತ್ತಿನಲ್ಲಿ 1–1 ಸಮ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಭರ್ಜರಿ ಸರ್ವ್ಗಳನ್ನು ಮಾಡುವ ಇಬ್ಬರು ಆಟಗಾರರ ಸೆಣಸಾಟದಲ್ಲಿ ವಿಶ್ವ ಕ್ರಮಾಂಕದಲ್ಲಿ 465ನೇ ಸ್ಥಾನದಲ್ಲಿರುವ ದಕ್ಷಿಣೇಶ್ವರ್ 6–4, 7–5 ರಿಂದ 88ನೇ ಕ್ರಮಾಂಕದ ಡಚ್ ಆಟಗಾರರನ್ನು ಸೋಲಿಸಿದರು. ಆ ಮೂಲಕ ಡೇವಿಸ್ ಕಪ್ ತಂಡದಲ್ಲಿ ಭರವಸೆಯ ಆಟಗಾರನಾಗಿ ಅವರು ವರ್ಚಸ್ಸು ವೃದ್ಧಿಸಿಕೊಂಡರು.
2025ರಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಪಂದ್ಯದಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಆಟಗಾರರನ್ನು ಹಿಮ್ಮೆಟ್ಟಿಸಿ ಭಾರತ ಗೆಲುವು ಸಾಧಿಸುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಎಸ್.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಮುಖಾಮುಖಿಯ ಮೊದಲ ಸಿಂಗಲ್ಸ್ನಲ್ಲಿ ಭಾರತದ ಅಗ್ರ ಆಟಗಾರ ಸುಮಿತ್ ನಾಗಲ್ ಅವರು ಕಳಪೆ ಆಟದಿಂದ ಚೇತರಿಸಿಕೊಂಡರೂ ಅಂತಿಮವಾಗಿ 0–6, 6–4, 3–6 ರಿಂದ ನೆದರ್ಲೆಂಡ್ಸ್ನ ಗಯ್ ಡಿ ಆಡೆನ್ ಅವರಿಗೆ ಮಣಿಯಬೇಕಾಯಿತು. ಪಂದ್ಯ 2 ಗಂಟೆ 28 ನಿಮಿಷ ನಡೆಯಿತು.
ನೆದರ್ಲೆಂಡ್ಸ್ 1–0 ಮುನ್ನಡೆ ಪಡೆಯುತ್ತಿದ್ದಂತೆ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ಹೊನಲು ಬೆಳಕಿನಡಿ ದಕ್ಷಿಣೇಶ್ವರ್ ಅವರು ಪಂದ್ಯ ಗೆಲ್ಲುವ ಮೂಲಕ ಮುಖಾಮುಖಿಗೆ ಜೀವಂತಿಕೆ ತಂದುಕೊಟ್ಟರು.
ಭಾನುವಾರ ನಡೆಯುವ ಡಬಲ್ಸ್ ಪಂದ್ಯದಲ್ಲಿ ಯುಕಿ ಭಾಂಬ್ರಿ– ಎನ್.ಶ್ರೀರಾಮ್ ಬಾಲಾಜಿ ಜೋಡಿ, ಸ್ಯಾಂಡರ್ ಅರೆಂಡ್ಸ್– ಡೇವಿಡ್ ಪೆಲ್ ಜೋಡಿಯನ್ನು ಎದುರಿಸಲಿದೆ. ಡಬಲ್ಸ್ ಪಂದ್ಯದ ನಂತರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿವೆ.
ಈ ಮುಖಾಮುಖಿಯ ವಿಜೇತರು, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಕ್ವಾಲಿಫೈಯರ್ಸ್ ಎರಡನೇ ಸುತ್ತಿಗೆ ಮುನ್ನಡೆಯಲಿದ್ದಾರೆ. ಸೋತ ತಂಡ ವಿಶ್ವ ಗುಂಪು 1ರಲ್ಲಿ ಆಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.