ADVERTISEMENT

ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಪಿಟಿಐ
Published 25 ಫೆಬ್ರುವರಿ 2026, 23:31 IST
Last Updated 25 ಫೆಬ್ರುವರಿ 2026, 23:31 IST
<div class="paragraphs"><p>ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅಭ್ಯಾಸ</p></div>

ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅಭ್ಯಾಸ

   

ಚೆನ್ನೈ: ಸತತ ಎರಡನೇ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಈಗ ಅಪಾರ ಒತ್ತಡದಲ್ಲಿದೆ. ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿದ್ದು ಮತ್ತು ಅಗ್ರಕ್ರಮಾಂಕದ ಬ್ಯಾಟರ್‌ಗಳ ಅಸ್ಥಿರತೆಗಳು ತಂಡದ ಚಿಂತೆಗೆ ಕಾರಣವಾಗಿವೆ. 

ಸೂಪರ್ ಎಂಟರ ಹಂತದಲ್ಲಿ ಇನ್ನುಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವು ಆತಿಥೇಯ ತಂಡಕ್ಕೆ ಜೀವಂತವಾಗುಳಿಯಲಿದೆ. ಎರಡರಲ್ಲಿ ಒಂದು ಸೋತರೂ ನಿರ್ಗಮನ ಖಚಿತ.  ಆದ್ದರಿಂದ ಗುರುವಾರ ಇಲ್ಲಿ ನಡೆಯಲಿರುವ ಜಿಂಬಾಬ್ವೆ ಮತ್ತು ಮಾರ್ಚ್ 1ರಂದು ಆಯೋಜಿಸಲಾಗಿರುವ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಗೆಲ್ಲಬೇಕಿದೆ. 

ADVERTISEMENT

ಜಿಂಬಾಬ್ವೆ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಡಿ ಗುಂಪಿನಲ್ಲಿ ತಂಡವು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಜಯಿಸಿತ್ತು. ಆದ್ದರಿಂದ ಭಾರತದ ಹಾದಿ ಸುಲಭವಲ್ಲ. ಅದಕ್ಕಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಸುಧಾರಣೆಗಳು ಅತ್ಯಗತ್ಯ.  ದಕ್ಷಿಣ ಆಫ್ರಿಕಾ ಎದುರು 76 ರನ್‌ಗಳ ಅಂತರದಿಂದ ಸೋತಿದ್ದು ಬ್ಯಾಟಿಂಗ್ ಲೋಪಗಳಿಂದಾಗಿಯೇ ಎಂಬುದು ಸ್ಪಷ್ಟ.

ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ದೊಡ್ಡ ಇನಿಂಗ್ಸ್ ಆಡಲಿಲ್ಲ. ಅವರ ಬ್ಯಾಟ್‌ಗಳಿಂದ ರನ್‌ಗಳು ಬರಲಿಲ್ಲ. ಮೂರನೇ  ಕ್ರಮಾಂಕದಲ್ಲಿ ಆಡುವ  ತಿಲಕ್ ವರ್ಮಾ ಅವರು ಈ ಹಂತದಲ್ಲಿ ತಮ್ಮ ಸಾಮರ್ಥ್ಯ ತೋರಬೇಕಿದೆ. ಇಲ್ಲದಿದ್ದರೆ ಇಶಾನ್  ಅವರು ಗುಂಪು ಹಂತದಲ್ಲಿ ಆಡಿದ ಅಮೋಘ ಇನಿಂಗ್ಸ್‌ಗಳು ವ್ಯರ್ಥವಾಗಲಿವೆ.

ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು  ಶಿವಂ ದುಬೆ ಅವರು ಮಧ್ಯಮ ಕ್ರಮಾಂಕದಲ್ಲಿ ಮುಕ್ತವಾಗಿ ಬ್ಯಾಟ್ ಬೀಸಲು ಅಗ್ರಬ್ಯಾಟರ್‌ಗಳು ಉತ್ತಮ ಆರಂಭ ನೀಡಬೇಕು. ಆಗ ದೊಡ್ಡ ಮೊತ್ತ ಗಳಿಸಲು ಅಥವಾ ಚೇಸ್ ಮಾಡಲು ಹೆಚ್ಚು ಅನುಕೂಲ. ಕೌಟುಂಬಿಕ ತುರ್ತು ಕಾರಣಗಳಿಂದಾಗಿ ರಿಂಕು ಸಿಂಗ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. 

ಈಗ ಮತ್ತೆ ಕೇರಳದ ಅನುಭವಿ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡುವತ್ತ ತಂಡದ ‘ಚಿಂತಕರ ಚಾವಡಿ’ಯಲ್ಲಿ ಚರ್ಚೆ ನಡೆಯುತ್ತಿದೆ. ಕಳೆದ ಪಂದ್ಯಗಳಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲಿ ಸಂಜು ನಿರೀಕ್ಷೆಯನ್ನು ಹುಸಿಗೊಳಿಸಿದ್ದರು. ಆದರೂ ಅವರಿಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆ ಇದೆ. 

ಬೌಲರ್‌ಗಳು ಜೊತೆಯಾಟಗಳಿಗೆ ತಡೆಯೊಡ್ಡುವತ್ತ ಯಶಸ್ಸು ಸಾಧಿಸಬೇಕು. ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಸ್ಪಿನ್ನರ್ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಹಾರ್ದಿಕ್ ಹಾಗೂ ಶಿವಂ ಅವರು ಉತ್ತಮ ಲಯದಲ್ಲಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರ ಬದಲು ಅಕ್ಷರ್ ಪಟೇಲ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಉಪನಾಯಕ ಅಕ್ಷರ್ ಅವರನ್ನು ಕಳೆದ ಪಂದ್ಯದಲ್ಲಿ ಆಡಿಸಿರಲಿಲ್ಲ. ಚೆಪಾಕ್‌ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಜಿಂಬಾಬ್ವೆಯ ಪ್ರಮುಖ ಬ್ಯಾಟರ್‌ಗಳಾದ ಬ್ರಯನ್ ಬೆನೆಟ್, ತಡಿವಾನಶೇ ಮರುಮನಿ, ರಿಯಾನ್ ಬರ್ಲ್ ಮತ್ತು ಆಲ್‌ರೌಂಡರ್ ಸಿಕಂದರ್ ರಝಾ ಅವರನ್ನು ನಿಯಂತ್ರಿಸುವುದು ಆತಿಥೇಯ ಬೌಲರ್‌ಗಳಿಗೆ ಪ್ರಮುಖ ಸವಾಲಾಗಲಿದೆ. ಜಿಂಬಾಬ್ವೆ ಬೌಲಿಂಗ್ ಪಡೆಯಲ್ಲಿರುವ ಬ್ಲೆಸಿಂಗ್ ಮುಝರಬಾನಿ, ಬ್ರಾಡ್ ಇವಾನ್ಸ್ ಹಾಗೂ ಡಿಯಾನ್ ಮೈಯರ್ಸ್ ಅವರು ಪರಿಣಾಮಕಾರಿ ದಾಳಿ ಮಾಡುವ ಸಮರ್ಥರಾಗಿದ್ದಾರೆ.

ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ  

ತಂಡಗಳು...

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಶಿವಂ ದುಬೆ ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ ಅರ್ಷದೀಪ್ ಸಿಂಗ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ವರುಣ್ ಚಕ್ರವರ್ತಿ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್.

ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ) ಬ್ರಯನ್ ಬೆನೆಟ್ ರಿಯಾನ್ ಬರ್ಲ್ ಗ್ರೆಮ್ ಕ್ರಿಮರ್ ಬ್ರಾಡ್ಲಿ ಇವಾನ್ಸ್ ಕ್ಲೈವ್ ಮದಾಂದೆ ಟಿನೊಟೆಂದಾ ಮಪೊಸಾ ಟ್ಯಾಡಿವನಾಶೆ ಮರುಮಣಿ ವೆಲ್ಲಿಂಗ್ಟನ್ ಮಸಕಜಾ ಟೋನಿ ಮುನಿಯೊಂಗಾ ತಶಿಂಗಾ ಮುಸೆಕಿವಾ ಬ್ಲೆಸಿಂಗ್ ಮುಝರಬಾನಿ ಡಿಯಾನ್ ಮೈಯರ್ಸ್ ರಿಚರ್ಡ್ ಎನ್‌ಗರಾವಾ ಬೆನ್ ಕರನ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.