ADVERTISEMENT

'ಬಂಧಿತ ಉಗ್ರನಿಗೆ ಆರ್‌ಎಸ್ಎಸ್ ನಂಟು'- ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ 

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 5:46 IST
Last Updated 1 ಮಾರ್ಚ್ 2019, 5:46 IST
   

ಬೆಂಗಳೂರು: ಗಡಿ ಭದ್ರತಾ ಸಿಬ್ಬಂದಿಯ ವಶದಲ್ಲಿರುವ ಉಗ್ರನೊಬ್ಬ ತಪ್ಪೊಪ್ಪಿಗೆ ವೇಳೆ ತನಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ನಂಟು ಇದೆ ಎಂದು ಹೇಳಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಉಗ್ರನ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

ಕಾಶ್ಮೀರಿ ಉಗ್ರನೊಬ್ಬನನ್ನು ಬಂಧಿಸಲಾಗಿದೆ.ವಿಚಾರಣೆ ವೇಳೆ ಆತ ತಮಗೆ ಆರ್‌ಎಸ್ಎಸ್ ಹಣ ಮತ್ತು ಆಯುಧಗಳನ್ನು ಪೂರೈಸುತ್ತಿದ್ದು ಹಿಂದೂಗಳನ್ನು ಕೊಲ್ಲಲು ಹೇಳುತ್ತಿದೆ.ಈ ಮೂಲಕ ಆರ್‌ಎಸ್ಎಸ್ ಹಿಂದೂ- ಮುಸ್ಲಿಂ ನಡುವೆ ದ್ವೇಷ ಹಬ್ಬಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೊ ಫೇಸ್‍ಬುಕ್ ಪುಟಗಳಲ್ಲಿ ಅಪ್‍ಲೋಡ್ ಆಗಿದೆ.

ಪುಲ್ವಾಮ ದಾಳಿ ನಂತರ ಕಿರಣ್ ಯಾದವ್ ಎಂಬಾತ ಈ ಫೋಟೊವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದು ಇದು ತಪ್ಪಾದ ಮಾಹಿತಿಯ ಮೂಲಕ ಜನರ ಹಾದಿ ತಪ್ಪಿಸುತ್ತಿದೆ.

ADVERTISEMENT

ಫ್ಯಾಕ್ಟ್ ಚೆಕ್
ಈ ಚಿತ್ರವನ್ನು ಬೂಮ್ ಟೀಮ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ಚಿತ್ರವಿರುವ ಹಲವಾರು ಸುದ್ದಿಗಳು ಲಭಿಸಿವೆ.ಈ ವರದಿಗಳ ಪ್ರಕಾರ ಚಿತ್ರದಲ್ಲಿರುವ ಉಗ್ರ ಪಾಕಿಸ್ತಾನದವನಾಗಿದ್ದು ಭದ್ರತಾ ಪಡೆಯ ಸಿಬ್ಬಂದಿ ಈತನನ್ನು 2016ರಲ್ಲಿ ಸೆರೆ ಹಿಡಿದಿದ್ದರು.

ಮಾಧ್ಯಮ ವರದಿಗಳನ್ನು ಪರಿಶೀಲಿಸಿದಾಗ ಈ ಬಗ್ಗೆ ಇರುವ ವಿಡಿಯೊ ಲಭ್ಯವಾಗಿದೆ.ಅಂದಹಾಗೆ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಅಬ್ದುಲ್ ಖಯ್ಯಮ್. 2016 ಸೆಪ್ಟೆಂಬರ್ 23ರಂದು ಜಮ್ಮು ಕಾಶ್ಮೀರದ ಅಂಕೂರ್ ಸೆಕ್ಟರ್‌ನಲ್ಲಿ ಈತನನ್ನು ಬಂಧಿಸಲಾಗಿತ್ತು.
ವಿಚಾರಣೆ ವೇಳೆ ಈತ ತಾನು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್ ಬಳಿಯ ಮನ್ಶೇರಾ ತರಬೇತಿ ಶಿಬಿರದಲ್ಲಿ 2004ರಲ್ಲಿ ಲಷ್ಕರೆ ಇ ತಯ್ಯಬಾದಿಂದ ತರಬೇತಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಖಯ್ಯಮ್ ಆರ್‌ಎಸ್‌ಎಸ್‌ ಜತೆ ನಂಟು ಹೊಂದಿದ್ದಾನೆ ಎಂಬ ತಪ್ಪಾದ ಮಾಹಿತಿಯೊಂದಿಗೆ ಕಳೆದ ವರ್ಷವೂ ಇದೇ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇನ್ನು ಕೆಲವು ಪೋಸ್ಟ್ ಗಳಲ್ಲಿ ಖಯ್ಯಮ್ ಕಾಂಗ್ರೆಸ್ ಪಕ್ಷ ಜತೆ ನಂಟು ಹೊಂದಿದ್ದಾನೆ ಎಂದು ಹೇಳಲಾಗಿತ್ತು.

ಆದರೆ ತಪ್ಪೊಪ್ಪಿಗೆ ವೇಳೆ ಖಯ್ಯಮ್, ಲಷ್ಕರೆ ಜತೆ ನಂಟು ಹೊಂದಿರುವುದರ ಬಗ್ಗೆ ಹೇಳಿದ್ದಾನೆ.ಅಂದಹಾಗೆ ಕಾಂಗ್ರೆಸ್ ಅಥವಾ ಆರ್‌ಎಸ್‌ಎಸ್‌ಜತೆ ಈತ ನಂಟು ಹೊಂದಿದ್ದಾನೆಎಂದು ಯಾವುದೇ ಸುದ್ದಿಮೂಲಗಳು ವರದಿ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.