ಕೋವಿಡ್-19 ತೀವ್ರವಾಗಿ ಕಾಡಿದ ಬಳಿಕ, ತಾವಿರುವ ಸ್ಥಳವು ಸೋಂಕಿನಿಂದ ಸುರಕ್ಷಿತವೇ ಎಂಬುದನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಸುರಕ್ಷಿತವೇ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಶಂಕೆ ವ್ಯಕ್ತವಾಗುತ್ತಿದೆ. ಆ್ಯಪ್ನಲ್ಲಿ ಖಾಸಗಿ ಮಾಹಿತಿಯ ಭದ್ರತೆ ಕುರಿತು ಸಮಸ್ಯೆಯ ಸಾಧ್ಯತೆಯ ಕುರಿತು ಎಥಿಕಲ್ ಹ್ಯಾಕರ್ ಒಬ್ಬರು ಪ್ರಶ್ನೆ ಎತ್ತಿದ ಬಳಿಕ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕು ಸಂಪರ್ಕಿತರ ಜಾಡು ತಿಳಿಯಲು ಮತ್ತು ವೈದ್ಯಕೀಯ ಸಲಹೆ ಸೂಚನೆಗಳಿಗಾಗಿ ಕೇಂದ್ರ ಸರ್ಕಾರವು ಈ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು.
ಮಂಗಳವಾರ ಫ್ರೆಂಚ್ ಹ್ಯಾಕರ್ ಮತ್ತು ಸೈಬರ್ ಸುರಕ್ಷತಾ ತಜ್ಞ ಈಲಿಯಟ್ ಆಲ್ಡರ್ಸನ್ ಎಂಬವರು, 9 ಕೋಟಿ ಭಾರತೀಯರ ಖಾಸಗಿ ದತ್ತಾಂಶವು ಅಪಾಯದಲ್ಲಿದೆ ಎಂದು ಹೇಳಿದ್ದರು. ಇದನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ, ಯಾವುದೇ ಬಳಕೆದಾರರ ವೈಯಕ್ತಿಕ ಮಾಹಿತಿಯೆಲ್ಲವೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದೆ.
ಈ ಕುರಿತು ಆರೋಗ್ಯ ಸೇತು ಆ್ಯಪ್ನ ಟ್ವಿಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಲಾಗಿದ್ದು, 'ನಾವು ನಿರಂತರವಾಗಿ ನಮ್ಮ ಸಿಸ್ಟಂಗಳನ್ನು ಪರೀಕ್ಷೆಗೊಳಪಡಿಸುತ್ತಿದ್ದೇವೆ ಮತ್ತು ಅಪ್ಗ್ರೇಡ್ ಮಾಡುತ್ತಲೇ ಇದ್ದೇವೆ. ಯಾವುದೇ ಭದ್ರತೆಯ ಉಲ್ಲಂಘನೆಯಾಗಿಲ್ಲ, ಡೇಟಾದ ಸೋರಿಕೆಯೂ ಆಗುವುದಿಲ್ಲ' ಎಂದು ಟ್ವಿಟರ್ನಲ್ಲಿ ತಿಳಿಸಲಾಗಿದೆ. "ಹ್ಯಾಕರ್ ಜೊತೆಗೂ ಮಾತನಾಡಿದ್ದೇವೆ. ಕೆಲವು ಸಂದರ್ಭಗಳಲ್ಲಿ ಬಳಕೆದಾರರ ಸ್ಥಳವನ್ನು ಪತ್ತೆ ಮಾಡುವುದು ಸಹಜವಾಗಿದ್ದು, ಇದನ್ನು ಗೌಪ್ಯತಾ ನೀತಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ" ಎಂದು ಸ್ಪಷ್ಟಪಡಿಸಲಾಗಿದೆ.
ಈ ಆ್ಯಪ್ ಬಳಕೆದಾರರ ಸ್ಥಳವನ್ನು ಜಿಪಿಎಸ್ ಮೂಲಕ ಪತ್ತೆ ಮಾಡುತ್ತದೆ ಮತ್ತು ಈ ಮಾಹಿತಿಯು ಸರ್ವರ್ನಲ್ಲಿ ಸುರಕ್ಷಿತವಾಗಿ, ಎನ್ಕ್ರಿಪ್ಟ್ ಮಾಡಿ ಮತ್ತು ಅನಾಮಿಕ ರೂಪದಲ್ಲಿ ಭದ್ರವಾಗಿರುತ್ತದೆ. ಕೋವಿಡ್-19 ಪಾಸಿಟಿವ್ ಕಂಡುಬಂದಾಗ ಮತ್ತು ಬಳಕೆದಾರರ ನೋಂದಣಿಯ ವೇಳೆ ಸ್ವಪ್ರೇರಣೆಯಿಂದ ತಮ್ಮ ಸ್ಥಳದ ಮಾಹಿತಿ ಹಂಚಿಕೊಂಡಾಗ, ಸ್ವಯಂ-ತಪಾಸಣೆ ಸಂದರ್ಭದಲ್ಲಿ ಅವರ ಸಂಪರ್ಕ ಪತ್ತೆ ಮಾಡುವ ಮಾಹಿತಿಯು ಬಳಕೆಯಾಗುತ್ತದೆ ಎಂದು ಟ್ವೀಟ್ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.