ಇದು ಹಿಂದೂ ದೇಶ, ಕ್ರಿಸ್ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ
ಬೆಂಗಳೂರು: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿ ಪುಂಡಾಟ ಮೆರೆದಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ.
ಒಡಿಶಾದ ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಆಟಾಟೋಪ ಮೆರೆದಿರುವ ವ್ಯಕ್ತಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಕಾರಿನಲ್ಲಿ ಬಂದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಸಂತಾ ಟೋಪಿ ಮಾರುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಇದು ಹಿಂದೂ ರಾಷ್ಟ್ರ, ಇಲ್ಲಿ ಕ್ರಿಸ್ಮಸ್ ಟೋಪಿಗಳನ್ನು ಮಾರುವ ಹಾಗಿಲ್ಲ, ನಡೀರಿ ನಡೀರಿ ಇಲ್ಲಿಂದ ಎಂದು ಒತ್ತಾಯ ಮಾಡುತ್ತಾನೆ.
ಆಗ ವ್ಯಾಪಾರಿಗಳು, ಅಣ್ಣವರೇ, ನಾವು ರಾಜಸ್ಥಾನದಿಂದ ಬಂದಿದ್ದೇವೆ. ನಾವು ಸಹ ಹಿಂದೂಗಳು ಎನ್ನುತ್ತಾರೆ. ಆಗ ಆತ, ಹಾ ಹಾ, ಹಿಂದೂಗಳಾದರೆ ಹಿಂದೂಗಳ ತರ ಇರೀ, ಇಲ್ಲಿ ಪುರಿ ಜಗನ್ನಾಥನೇ ಬಾಸ್. ನೀವು ಬೇಕಾದರೆ ಜಗನ್ನಾಥನ ಮೂರ್ತಿ ಮಾರಾಟ ಮಾಡಿ ಎಂದು ಅರಚಾಡುತ್ತಾನೆ.
ಅರಚಾಡಿದ ವ್ಯಕ್ತಿಯ ಬೆಂಬಲಕ್ಕೆ ಕಾರಿನಲ್ಲಿದ್ದ ವ್ಯಕ್ತಿಗಳೂ ಇಳಿದು ಬಂದು ಬೆಂಬಲ ನೀಡುತ್ತಾರೆ. ವ್ಯಾಪಾರಿಗಳನ್ನು ಜಾಗ ಖಾಲಿ ಮಾಡಿ ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತಾರೆ.
ವಿಡಿಯೊ ಹಂಚಿಕೊಂಡು ಹಲವರು, ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಮಾಡೆಲ್ ಹೇಗಿದೆ ನೋಡಿ ಎಂದು ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.