
ಸಿಮ್ರನ್ ಬಾಲಾ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಬಾರಿ ನಡೆದ ಗಣರಾಜ್ಯೋತ್ಸವ ಪಥಸಂಚಲನವು ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ದೇಶದ ಪ್ರಮುಖ ಅರೆಸೇನಾ ಪಡೆಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಪುರುಷರ ತುಕಡಿಯನ್ನು ಇದೇ ಮೊದಲ ಬಾರಿಗೆ ತರುಣಿಯೊಬ್ಬರು ಮುನ್ನಡೆಸುವ ಮೂಲಕ ಇತಿಹಾಸ ಬರೆದರು. 26 ವರ್ಷದ ಆ ಹೆಮ್ಮೆಯ ಹೆಣ್ಣುಮಗಳು ಸಿಮ್ರನ್ ಬಾಲಾ.
ಮಹಿಳೆಯರಿರುವ ಸೇನಾ ತುಕಡಿಯ ನೇತೃತ್ವವನ್ನು ಮಹಿಳೆಯರೇ ವಹಿಸಿಕೊಳ್ಳುವುದು ಸಾಮಾನ್ಯ. ಆದರೆ 140 ಪುರುಷರಿದ್ದ ಸಿಆರ್ಪಿಎಫ್ ತುಕಡಿಯನ್ನು ಯುವತಿಯೊಬ್ಬರು ಮುನ್ನಡೆಸಿದ್ದನ್ನು ನೋಡಿ ದೇಶವೇ ಸಂತಸಪಟ್ಟಿತು.
ಈ ಸಾಧನೆ ಮಾಡಿದ ಸಿಮ್ರನ್ ಹುಟ್ಟಿ ಬೆಳೆದಿದ್ದು ಪದೇ ಪದೇ ಗುಂಡಿನ ಸದ್ದಿನಿಂದ ತಲ್ಲಣಿಸುವ ಗಡಿಭಾಗ ಜಮ್ಮು- ಕಾಶ್ಮೀರದಲ್ಲಿ. ಆ ಗುಂಡಿನ ಮೊರೆತವೇ ಸಿಮ್ರನ್ ಒಳಗೆ ಸೇನೆ ಸೇರುವ ಕನಸು ಬಿತ್ತಿದ್ದು. ಭಯೋತ್ಪಾದನೆಯ ಭೀತಿಯಿಂದ ನಲುಗಿಹೋಗಿದ್ದವರ ನಡುವೆ ತನ್ನ ಕನಸಿನ ಬೆನ್ನೇರಿದ ಹುಡುಗಿ, ಸೇನೆಗೆ ಸೇರುವ ಗುರಿಯನ್ನು 2023ರಲ್ಲಿ ತಲುಪಿದರು.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ಮೀಸಲು ಶಸ್ತ್ರಾಸ್ತ್ರ ಪಡೆಯ ಸಹಾಯಕ ಕಮಾಂಡೆಂಟ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ವರ್ಷ ಈ ಪರೀಕ್ಷೆಯಲ್ಲಿ ಜಮ್ಮು–ಕಾಶ್ಮೀರದಿಂದ ತೇರ್ಗಡೆಯಾದ ಏಕೈಕ ವ್ಯಕ್ತಿ ಸಿಮ್ರನ್. ತರಬೇತಿ ವೇಳೆ ಸಿಮ್ರನ್ ತೋರಿದ ಶಿಸ್ತು, ನಾಯಕತ್ವ ಗುಣ, ಫಿಟ್ನೆಸ್ ಹಾಗೂ ಆತ್ಮವಿಶ್ವಾಸ ಗಮನಾರ್ಹವಾಗಿದ್ದವು. ಅವಕಾಶ ಕೊಟ್ಟರೆ ಮಹಿಳೆಯರು ಯಾವ ಕೆಲಸವನ್ನು ಬೇಕಾದರೂ ನಿರ್ವಹಿಸಬಲ್ಲರು ಎಂಬುದನ್ನಷ್ಟೇ ಅಲ್ಲ, ಪ್ರಬಲ ನಾಯಕತ್ವಕ್ಕೆ ಮಹಿಳೆ, ಪುರುಷ ಎಂಬ ಭೇದವಿಲ್ಲ, ಅದಕ್ಕೆ ಬೇಕಾಗಿರುವುದು ಶಿಸ್ತು ಮತ್ತು ಸಾಮರ್ಥ್ಯ ಎಂಬುದನ್ನೂ ಸಿಮ್ರನ್ ಸಾಬೀತುಪಡಿಸಿದ್ದಾರೆ.
ಜಮ್ಮುವಿನ ಸರ್ಕಾರಿ ಮಹಿಳಾ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಸಿಮ್ರನ್, ಅಧಿಕಾರಿಯಾಗಿ ಸೇನೆಗೆ ಸೇರಿದ ರಜೌರಿ ಜಿಲ್ಲೆಯ ಮೊದಲ ವ್ಯಕ್ತಿ ಸಹ ಆಗಿದ್ದಾರೆ. ಭಯೋತ್ಪಾದನೆ ನಿಗ್ರಹ, ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಆಂತರಿಕ ಭದ್ರತಾ ಕಾರ್ಯದಲ್ಲಿ ಸಿಆರ್ಪಿಎಫ್ ತೊಡಗಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.