ADVERTISEMENT

ಒಳನೋಟ | ನ್ಯಾಯಕ್ಕಾಗಿ ಹೋರಾಡುತ್ತಿದೆ ಬಾಳಿಗ ಕುಟುಂಬ

ಉದಯ ಯು.
Published 18 ಜೂನ್ 2022, 20:02 IST
Last Updated 18 ಜೂನ್ 2022, 20:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಅವರ ಹತ್ಯೆಯಾಗಿ ಆರು ವರ್ಷಗಳು ಕಳೆದಿವೆ. ಪ್ರಕರಣದ ತನಿಖೆಯು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ, ‘ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ’ ಎಂದು ಆರೋಪಿಸಿ ನಗರದಲ್ಲಿ ಈಚೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ನಗರದ ರಥಬೀದಿಯ ವೆಂಕಟರಮಣ ದೇವಾಲಯದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ಬಾಳಿಗ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದು ಹೋರಾಟಕ್ಕೆ ಮುಂದಾಗಿದ್ದರು. ಅವರನ್ನು ಮಂಗಳೂರಿನ ಕೊಡಿಯಾಲ್ ಬೈಲ್ ಬಳಿ 2016ರ ಮಾರ್ಚ್‌ 21ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಜೂನ್‌ 26ರಂದು ನರೇಶ್ ಶೆಣೈ ಎಂಬುವರನ್ನು ಬಂಧಿಸಲಾಗಿತ್ತು. 2016ರ ಸೆ. 15ರಂದು ಶೆಣೈಗೆ ಹೈಕೋರ್ಟ್ ಜಾಮೀನು ನೀಡಿತ್ತು.

ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಿಘ್ನೇಶ್‌ ನಾಯಕ್‌ ಅವರು ಘಟನೆ ನಡೆದು ಕೆಲವು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ತಮಗೆ ದುಬೈ ಹಾಗೂ ಇತರ ದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಾಳಿಗ ಅವರ ಸಹೋದರಿಯರು ಆರೋಪಿಸಿದ್ದರು. ಬಾಳಿಗ ಅವರ ಹತ್ಯೆಯ ವಿಚಾರಣೆಯನ್ನು ಚುರುಕೊಗೊಳಿಸಬೇಕು, ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಈವರೆಗೆ ಅನೇಕ ಹೋರಾಟಗಳು ನಡೆದಿವೆ. ಸಾಮಾಜಿಕ ಮಾಧ್ಯಮದಲ್ಲಿ ‘ಜಸ್ಟೀಸ್‌ ಫಾರ್‌ ವಿನಾಯಕ ಬಾಳಿಗ’ ಎಂಬ ಅಭಿಯಾನವೂ ಜೋರಾಗಿ ನಡೆದಿತ್ತು.

ADVERTISEMENT

ಹತ್ಯೆ ನಡೆದು ಆರು ವರ್ಷಗಳು ಕಳೆದರೂ ಬಾಳಿಗ ಅವರ ಕುಟುಂಬ ದವರಿಗೆ ನ್ಯಾಯ ಸಿಕ್ಕಿಲ್ಲ. ಅವರ ತಂದೆ- ತಾಯಿ‌ ಇದೇ ಕೊರಗಿನಲ್ಲಿ‌ ನಿಧನರಾಗಿದ್ದಾರೆ. ಆರೋಪಿ ನರೇಶ್‌ ಅವರ ಜಾಮೀನು ರದ್ದುಪಡಿಸಬೇಕು, ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಬಾಳಿಗ ಅವರ ಸಹೋದರಿಯರು ಮಾಡಿದ್ದ ಮನವಿಯನ್ನೂ ಹೈಕೋರ್ಟ್‌ ಪುರಸ್ಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.