ಹಾಯ್ ಫ್ರೆಂಡ್ಸ್
ಆ ದಿನಗಳೇ ಬೇರೆ. ದಿನದ ಯಾವುದೇ ಸಮಯಕ್ಕೂ ಐದಾರು ಹುಡುಗರು ಸೇರಿಕೊಳ್ಳುತ್ತಿದ್ದೆವು. ಬ್ಯಾಟ್, ಬಾಲ್ ಹಿಡಿದು ರಸ್ತೆಗಿಳಿಯುತ್ತಿದ್ದೆವು. ರಸ್ತೆಬದಿಯ ಲೈಟ್ ಕಂಬವೇ ನಮ್ಮ ವಿಕೆಟ್ ಆಗುತ್ತಿತ್ತು. ಮನಬಂದಷ್ಟು ಹೊತ್ತು ಆಟವಾಡುತ್ತಿದ್ದೆವು. ಆದರೆ, ಇಂದಿನ ಮಕ್ಕಳಲ್ಲಿ ಅಂತಹ ಆಟದ ಸಂಭ್ರಮವೇ ಕಾಣುತ್ತಿಲ್ಲ. ಅಷ್ಟೇ ಏಕೆ, ಅವರೀಗ ಆಟವಾಡುವುದೇ ಕಡಿಮೆಯಾಗಿಬಿಟ್ಟಿದೆ.
ಮಕ್ಕಳು ಮನೆಯಿಂದ ಹೊರಗೆ ಬಂದು ಆಟವಾಡಬೇಕು. ಆಗಲೇ ಅವರ ವ್ಯಕ್ತಿತ್ವ ಸರ್ವಾಂಗೀಣವಾಗಿ ವಿಕಾಸವಾಗುವುದು. ಆಡುವುದೆಂದರೆ ವಿಡಿಯೊ ಗೇಮ್ ಅಲ್ಲ. ದೈಹಿಕ ಹಾಗೂ ಮಾನಸಿಕವಾಗಿ ತೊಡಗಿಕೊಂಡು ಮೈದಾನದಲ್ಲಿ ಆಡುವ ಆಟಗಳು. ಅದರೆ, ಬೆಂಗಳೂರಿನಂತಹ ಊರುಗಳಲ್ಲಿ ಇವತ್ತು ಆಡಲು ಮೈದಾನಗಳು ಎಲ್ಲಿವೆ ಎಂಬ ನಿಮ್ಮ ಪ್ರಶ್ನೆಗೆ ಏನೆಂದು ಉತ್ತರಿಸುವುದು?
ವಿದ್ಯಾಭ್ಯಾಸ ಬಹಳ ಮುಖ್ಯವಾದದ್ದು. ಅದರಷ್ಟೇ ಮಹತ್ವ ಕ್ರೀಡೆಗೂ ಕೊಡಬೇಕು. ಅಂತಹ ವಾತಾವರಣ ನಿರ್ಮಾಣವಾಗಬೇಕು. ಯಾರಿಗೆ ಗೊತ್ತು ಯಾರಲ್ಲಿ ಎಂತಹ ಪ್ರತಿಭೆ ಅಡಗಿರುತ್ತದೆ ಎಂಬುದು.
ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಎಲ್ಲ ಅವಕಾಶಗಳು ಮುಕ್ತವಾಗಿ ಸಿಗಬೇಕು. ನಾನು ಕ್ರಿಕೆಟ್ಗೆ ಕೊಟ್ಟಷ್ಟೇ ಮಹತ್ವವನ್ನು ಶಿಕ್ಷಣಕ್ಕೂ ಕೊಟ್ಟಿದ್ದೆ. ನಿತ್ಯ ಆಟವಾಡಿದರೂ ನನ್ನ ಎಂಜಿನಿಯರಿಂಗ್ ಅಭ್ಯಾಸದಲ್ಲಿ ಏನೂ ತೊಂದರೆ ಆಗದಂತೆ ನೋಡಿಕೊಂಡಿದ್ದೆ. ಅಂದಿನ ಅಭ್ಯಾಸವನ್ನು ಅಂದೇ ಮುಗಿಸುತ್ತಿದ್ದೆ. ನೀವೂ ಹಾಗೆಯೇ ಬ್ಯಾಲೆನ್ಸ್ ಮಾಡಬೇಕು. ಮಾಡುತ್ತೀರಿ ಅಲ್ಲವೇ?
ಭಾರತದ ಅಗ್ರಗಣ್ಯ ಕ್ರಿಕೆಟ್ ತಾರೆ ಎನಿಸಿದ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ನಲ್ಲಿ 619 ವಿಕೆಟ್ ಗಳಿಸಿದ್ದಾರೆ. ಪಾಕಿಸ್ತಾನದ ಎದುರಿನ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಎಲ್ಲ ಹತ್ತು ವಿಕೆಟ್ ಗಳಿಸಿದ ವಿಶ್ವದಾಖಲೆಗೆ ಅವರು ಒಡೆಯರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.