ADVERTISEMENT

World Radio Day: ಪ್ರದೇಶ ಸಮಾಚಾರ ಓದುತ್ತಿರುವವರು ನಾಗೇಶ ಶಾನಭಾಗ...

ಬಿ.ಜೆ.ಧನ್ಯಪ್ರಸಾದ್
Published 13 ಫೆಬ್ರುವರಿ 2026, 10:44 IST
Last Updated 13 ಫೆಬ್ರುವರಿ 2026, 10:44 IST
<div class="paragraphs"><p>ನಾಗೇಶ ಶಾನಭಾಗ</p></div>

ನಾಗೇಶ ಶಾನಭಾಗ

   

ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಮೂರು ದಶಕಗಳು ಕಾರ್ಯನಿರ್ವಹಿಸಿರುವ ನಾಗೇಶ ಶಾನಭಾಗ ಅವರ ಧ್ವನಿ ಜನಮನದಲ್ಲಿ ಹಾಸುಹೊಕ್ಕಾಗಿದೆ. 1970ರಿಂದ 2000ವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಸ್ವಯಂನಿವೃತ್ತಿ ಪಡೆದು ಮಕ್ಕಳಿಗೆ ಗಣಿತ ಕಲಿಸುವ ಕಾಯಕದಲ್ಲಿ ತೊಡಗಿಕೊಂಡಿದ್ಧಾರೆ.

ADVERTISEMENT

ಇಂದಿಗೂ ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ರೇಡಿಯೊದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 13ರಂದು ‘ವಿಶ್ವ ರೇಡಿಯೊ ದಿನ’ ಆಚರಿಸಲಾಗುತ್ತದೆ. ತನ್ನಿಮಿತ್ತ ನಾಗೇಶ ಶಾನಭಾಗ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ನಾಗೇಶ ಅವರು 1948 ಡಿ.25ರಂದು ಧಾರವಾಡದಲ್ಲಿ ಜನಿಸಿದರು. ಮಂಗೇಶ ಶಾನಭಾಗ ಮತ್ತು ರಮಾಬಾಯಿ ದಂಪತಿಯ ಪುತ್ರ. ಇಲ್ಲಿನ ನಾರಾಯಣಪುರದಲ್ಲಿ ನೆಲೆಸಿದ್ದಾರೆ. ಕೆ.ಇ ಬೋರ್ಡ್‌ ಶಾಲೆ, ಪ್ರೆಸೆಂಟೇಶನ್‌ ಕಾನ್ವೆಂಟ್‌, ಬಾಸೆಲ್‌ ಮಿಷನ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಹಾಗೂ ಜೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಶಿಕ್ಷಣ ಪಡೆದಿದ್ದಾರೆ. ಕನ್ನಡ ಸಾಹಿತ್ಯದಲ್ಲೂ (ಬಿ.ಎ) ಪದವಿ ಪಡೆದಿದ್ದಾರೆ. ಪದವಿ ಮುಗಿಸಿದ ಬಳಿಕ ಕೆಲ ವರ್ಷ ಪ್ರೆಸೆಂಟೇಶನ್‌ ಕಾನ್ವೆಂಟ್‌ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ಧಾರೆ.

‘ಕತೆ ಹೇಳುವುದು’, ‘ಗಾಯನ’, ‘ಮಿಮಿಕ್ರಿ’ ಮೊದಲಾದ ಚಟುವಟಿಕೆಗಳಲ್ಲಿ ಅವರಿಗೆ ಬಾಲ್ಯದಿಂದಲೂ ಆಸಕ್ತಿ ಇತ್ತು. ಬಾಲ್ಯದಲ್ಲೇ ಆಕಾಶವಾಣಿಯ ‘ಗಿಳಿವಿಂಡು’ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಖುಷಿ, ಪ್ರತಿಭೆ ಪ್ರದರ್ಶನಕ್ಕಿದ್ದ ಅವಕಾಶಗಳಿಂದಾಗಿ ಆಕಾಶವಾಣಿ ಕಡೆಗೆ ಅವರಿಗೆ ಒಲವು ಬೆಳೆಯಿತು. ಅವರ ಶಾಲಾ ಶಿಕ್ಷಕರಾಗಿ ನಂತರ ಆಕಾಶವಾಣಿ ಸೇರಿದ್ದ ವೆಂಕಟೇಶ ಗೋಡ್ಖಿಂಡಿ ಅವರೇ ಪ್ರೇರಣೆ.

1970ರಲ್ಲಿ ಉದ್ಘೋಷಕರಾಗಿ ಧಾರವಾಡ ಆಕಾಶವಾಣಿ ಕೇಂದ್ರ ಸೇರಿದರು. ಅವರ ಆಯ್ಕೆ ಸಮಿತಿಯಲ್ಲಿ ದ.ರಾ.ಬೇಂದ್ರೆ, ಎನ್‌.ಕೆ.ಕುಲಕರ್ಣಿ ಇದ್ದರು. ನಾಗೇಶ ಅವರು ಉದ್ಘೋಷ ವಿಭಾಗ, ನಿರ್ಮಾಣ ವಿಭಾಗ, ವಾರ್ತಾವಾಚನ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಖಾದ್ರಿ ಅಚ್ಚುತನ್‌, ಮಾಧವ ಮೊಕಾಶಿ, ನಾಗೇಶ ನಾಯಕ್‌ ಮೊದಲಾದವರ ಮಾರ್ಗದರ್ಶನದಲ್ಲಿ ವೃತ್ತಿಯಲ್ಲಿ ಹೆಜ್ಜೆ ಹಾಕಿದರು. ಮಕ್ಕಳ ಕಾರ್ಯಕ್ರಮಗಳನ್ನು (ವಿಜ್ಞಾನ, ಪಾಠ...) ವಿಶಿಷ್ಟವಾಗಿ ರೂಪಿಸಿ ತಮ್ಮದೇ ಛಾಫು ಮೂಡಿಸಿದ್ದಾರೆ.

ಸತತ 22 ವರ್ಷ ವಾರ್ತಾ ವಾಚಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರದೇಶ ಸಮಾಚಾರದ ಓದುತ್ತಿದ್ದ ಅವರ ಧ್ವನಿ ಜನಮಾನಸದಲ್ಲಿ ಅಚ್ಚಾಗಿದೆ. ಧ್ವನಿ ಕೇಳಿಯೇ ಗುರುತಿಸುವಷ್ಟು ಮಟ್ಟಿಗೆ ಅವರು ಪರಿಚಿತರು. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

‘ಪ್ರದೇಶ ಸಮಾಚಾರ ಓದುತ್ತಿದ್ದನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ, ಅದೇ ನನಗೆ ಖುಷಿ. ಆಕಾಶವಾಣಿ ಸೇರುವವರಿಗೆ ಧ್ವನಿ ಚೆನ್ನಾಗಿರಬೇಕು. ಭಾಷಾ ಪ್ರಭುತ್ವ, ಸಂಗೀತ ಜ್ಞಾನ ಮತ್ತು ಸಮಯ ಪ್ರಜ್ಞೆ ಇರಬೇಕು. ಸಾಹಿತ್ಯ ಓದಬೇಕು. ಉಚ್ಚಾರಣೆ ದೋಷ ಇರಬಾರದು. ಅಲ್ಪಪ್ರಾಣ ಮತ್ತು ಮಹಾಪ್ರಾಣ ತಿಳಿದಿರಬೇಕು. ಈಗ ಮನೆಯಲ್ಲಿ ಮಕ್ಕಳಿಗೆ ಗಣಿತವನ್ನು ಕಲಿಸುತ್ತೇನೆ. ಹಲವು ಶಿಷ್ಯರು ದೇಶ, ವಿದೇಶಗಳಲ್ಲಿ ವಿವಿಧ ಉದ್ಯೋಗಗಳಲ್ಲಿ (ಎಂಜಿನಿಯರ್‌, ಶಿಕ್ಷಕ...) ಇದ್ದಾರೆ. ಬೋಧನೆ ಖುಷಿ ನೀಡುತ್ತದೆ’ ಎನ್ನುತ್ತಾರೆ ನಾಗೇಶ ಶಾನಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.