
ಅಮೃತಾ ನಾಯ್ಡು
ಯಾವುದೇ ಬಗೆಯ ಚರ್ಮವಿರಲಿ, ಅದಕ್ಕೆ ಹೊಂದುವ ಸನ್ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಬಳಸುವುದು ಬಹಳ ಮುಖ್ಯ. ಅದು ಬೇಸಿಗೆ ಇರಲಿ, ಮಳೆಗಾಲ, ಚಳಿಗಾಲವೇ ಇರಲಿ, ತ್ವಚೆ ಆರೋಗ್ಯಕರವಾಗಿ ಇರಲು ಇವೆರಡರ ಬಳಕೆ ಅತ್ಯಗತ್ಯ. ಶೂಟಿಂಗ್ ಇರುವಾಗ ಕೃತಕ ಬೆಳಕಿಗೆ ಚರ್ಮವನ್ನು ಹೆಚ್ಚು ಒಡ್ಡಿಕೊಳ್ಳುವ ಅಗತ್ಯ ಇರುತ್ತದೆ. ಅದಕ್ಕೆಂದೇ ಚರ್ಮತಜ್ಞರು ರಾತ್ರಿ ವೇಳೆ ಹಚ್ಚಲೆಂದು ನನಗೆ ಕ್ರೀಂ ಹಾಗೂ ಸೀರಮ್ಗಳನ್ನು ನೀಡಿದ್ದಾರೆ. ಅವನ್ನು ವಾರದಲ್ಲಿ ಒಂದು ಬಾರಿ ಮಲಗುವ ವೇಳೆ ಹಚ್ಚುತ್ತೇನೆ.
ಅದು ಬಿಟ್ಟರೆ ದೇಹದಲ್ಲಿ ಆದಷ್ಟೂ ನೀರಿನಂಶ ಇರುವಂತೆ ನೋಡಿಕೊಳ್ಳುತ್ತೇನೆ. ದೇಹ ಒಳಗಿನಿಂದ ಆರೋಗ್ಯ ವಾಗಿದ್ದಾಗ ಅದು ಚರ್ಮದ ಮೇಲೆ ಪ್ರತಿಫಲಿಸುತ್ತದೆ. ಹಾಗಾಗಿ, ನಿತ್ಯ ಆ್ಯಪಲ್, ಬೀಟ್ರೂಟ್ ಮತ್ತು ಕ್ಯಾರೆಟ್ ಹಾಕಿ ಮಾಡಿದ ಎಬಿಸಿ ಜ್ಯೂಸ್ ಅನ್ನು ಕುಡಿಯುತ್ತೇನೆ. ಇದರ ಜತೆಗೆ ಕುಂಬಳಕಾಯಿ ಮತ್ತು ಸೋರೆಕಾಯಿ ಜ್ಯೂಸ್ ಕುಡಿಯುತ್ತೇನೆ. ಯಾವುದೇ ಜ್ಯೂಸ್ ಇರಲಿ ಅದನ್ನು ಸಿದ್ಧಪಡಿಸುವಾಗ ಶುಂಠಿ, ಆಮ್ಲವನ್ನು ಬೆರೆಸಿಯೇ ಮಾಡುತ್ತೇನೆ. ನನ್ನದು ಶೀತಪ್ರಕೃತಿ. ಕೆಲವೊಮ್ಮೆ ಬೇಗ ಶೀತ ಆಗಿಬಿಡುತ್ತದೆ. ಅಂಥ ಸಂದರ್ಭದಲ್ಲಿ ಮಾತ್ರ ವಾರಗಳ ಮಟ್ಟಿಗೆ ಈ ಜ್ಯೂಸ್ ಕುಡಿಯುವುದನ್ನು ನಿಲ್ಲಿಸುತ್ತೇನೆ.
ಇನ್ನು ಫೇಸ್ಪ್ಯಾಕ್, ಹೇರ್ಪ್ಯಾಕ್ ಮಾಡಿಕೊಳ್ಳುವಷ್ಟು ಸಮಯ ಇಲ್ಲ. ಹಾಗಾಗಿ, ಕೂದಲ ಆರೈಕೆಗೆ ಗಾಣದಿಂದ ತೆಗೆದ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತೇನೆ. ಅದು ಬಿಟ್ಟರೆ ಬೇರೆ ಏನೂ ಮಾಡುವುದಿಲ್ಲ.
ನನ್ನ ಪ್ರಕಾರ, ಆಂತರ್ಯದ ಸೌಂದರ್ಯವೇ ನಮ್ಮನ್ನು ಹೆಚ್ಚು ಆಕರ್ಷಕ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದಷ್ಟೂ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ನಮ್ಮ ಸುತ್ತಲೂ ಇರುವವರ ಬಗ್ಗೆ ಅಂತಃಕರಣ ಉಕ್ಕುತ್ತದೆ. ಅದು ನಮ್ಮೊಳಗಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮವರು, ತಮ್ಮವರಿಗೆ ಒಳ್ಳೆಯದು ಬಯಸುವುದೆಂದರೆ ನಮಗೆ ನಾವೇ ಒಳ್ಳೆಯದು ಬಯಸಿಕೊಂಡಂತೆ. ನಮ್ಮೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಿದರೆ ದೇಹ ಹೊಳಪಿನಿಂದ ಕೂಡಿರುತ್ತದೆ. ಹೀಗೆ ಹೊಳೆಯುವಂತೆ ಮಾಡಲು, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡರೆ ಸಾಕು. ಉಳಿದಂತೆ ಯಾವ ಸಿದ್ಧತೆಯೂ ಬೇಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.