ನವದೆಹಲಿ: ತಮಿಳುನಾಡು ಮೂಲದ ಹಾಗೂ ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಶನಿವಾರದಿಂದ ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್ ಜತೆ ವಿಲೀನಗೊಳ್ಳಲಿದೆ.
ಹಣಕಾಸು ಪರಿಸ್ಥಿತಿ ಹದಗೆಟ್ಟಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ‘ಡಿಬಿಎಸ್ ಬ್ಯಾಂಕ್ ಇಂಡಿಯಾ’ ಜತೆ ವಿಲೀನಗೊಳಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತ್ತು. ಶನಿವಾರದಿಂದ (ನವೆಂಬರ್ 27ರಿಂದ) ಬ್ಯಾಂಕ್ ವಿಲೀನ ಅಸ್ತಿತ್ವಕ್ಕೆ ಬರಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೇಳಿದೆ.
ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಎಲ್ಲ ಶಾಖೆಗಳು ನವೆಂಬರ್ 27ರಿಂದ ಡಿಬಿಎಸ್ ಬ್ಯಾಂಕ್ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ಬ್ಯಾಂಕ್ ಖಾತೆದಾರರಿಗೆ ಹಣ ಹಿಂಪಡೆಯಲು ವಿಧಿಸಲಾಗಿದ್ದ ನಿರ್ಬಂಧವನ್ನು, ವಿಲೀನಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಬಳಿಕ ಹಿಂಪಡೆಯಲಾಗಿತ್ತು. ಹೀಗಾಗಿ ಠೇವಣಿದಾರರ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45ರ ಅಡಿಯಲ್ಲಿ ₹318 ಕೋಟಿಯ ಬಾಂಡ್ಗಳನ್ನು ರದ್ದುಗೊಳಿಸಲು ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ಆರ್ಬಿಐ ಸೂಚಿಸಿದೆ. ಹೀಗಾಗಿ ಆ ಬಾಂಡ್ಗಳ ಮೇಲೆ ಹೂಡಿಕೆ ಮಾಡಿದವರಿಗೆ ನಷ್ಟವಾಗಲಿದೆ.
ಇದನ್ನೂ ಓದಿ:ಷೇರುದಾರರಿಗೆ ನಷ್ಟ; ಗ್ರಾಹಕರಿಗೆ ಸಂಕಷ್ಟ
‘ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಯೋಜನೆ 2020’ ಪ್ರಕಾರ ಬ್ಯಾಂಕ್ನ ಷೇರುಗಳು ಡೀಲಿಸ್ಟೆಡ್ (ವಿಲೀನದ ಬಳಿಕ ಷೇರುಪೇಟೆಯಲ್ಲಿ ಮಾಡಿಕೊಂಡ ನೋಂದಣಿ ಚಾಲ್ತಿಯಲ್ಲಿ ಉಳಿಯುವುದಿಲ್ಲ. ಹೀಗಾಗಿ ಬ್ಯಾಂಕಿನ ಷೇರುಗಳನ್ನು ಮಾರಲು ಅಥವಾ ಖರೀದಿಸಲು ಆಗುವುದಿಲ್ಲ) ಆಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.