ADVERTISEMENT

ಬ್ಯಾಂಕ್ ಠೇವಣಿಗೆ ವಿಮೆ: ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅಸ್ತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 14:26 IST
Last Updated 28 ಜುಲೈ 2021, 14:26 IST
2020ರಲ್ಲಿ ಆರ್‌ಬಿಐನಿಂದ ವಹಿವಾಟು ನಿರ್ಬಂಧಕ್ಕೆ ಒಳಗಾಗಿದ್ದ ಯೆಸ್‌ ಬ್ಯಾಂಕ್‌–ಸಾಂದರ್ಭಿಕ ಚಿತ್ರ
2020ರಲ್ಲಿ ಆರ್‌ಬಿಐನಿಂದ ವಹಿವಾಟು ನಿರ್ಬಂಧಕ್ಕೆ ಒಳಗಾಗಿದ್ದ ಯೆಸ್‌ ಬ್ಯಾಂಕ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಠೇವಣಿ ವಿಮೆ ಮತ್ತು ಸಾಲ ಖಾತರಿ ಮಸೂದೆ 2021ರ ಅಡಿಯಲ್ಲಿ ಬ್ಯಾಂಕ್‌ನ ಗ್ರಾಹಕರ ಠೇವಣಿಗೆ ರಕ್ಷಣೆಗೆ ಒದಗಿಸುವ ತಿದ್ದುಪಡಿ ಮಸೂದೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರ್‌ಬಿಐನಿಂದ ಬ್ಯಾಂಕ್‌ಗಳ ಮೇಲೆ ನಿರ್ಬಂಧ ಜಾರಿಯಾದರೂ ಗ್ರಾಹಕರಿಗೆ 90 ದಿನಗಳ ಒಳಗೆಠೇವಣಿದಾರರಿಗೆ ₹ 5 ಲಕ್ಷದವರೆಗೆ ಹಣ ಪರಿಹಾರ ರೂಪದಲ್ಲಿ ಸಿಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಎಲ್ಲ ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ವಿದೇಶಿ ಬ್ಯಾಂಕ್‌ಗಳ ಶಾಖೆಗಳು ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿವೆ. ಪ್ರಸ್ತುತ ಹಣಕಾಸು ವಹಿವಾಟು ನಿರ್ಬಂಧಕ್ಕೆ ಒಳಗಾಗಿರುವ ಬ್ಯಾಂಕ್‌ಗಳಿಗೂ ನಿರ್ಣಯ ಅನ್ವಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್‌ಗಳು ದಿವಾಳಿ ಅಥವಾ ವಹಿವಾಟು ನಿರ್ಬಂಧಕ್ಕೆ ಒಳಗಾದ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ರಕ್ಷಣೆ ಒದಗಿಸುವ ಠೇವಣಿ ವಿಮೆಯ ಮೊತ್ತವನ್ನು ಕಳೆದ ವರ್ಷ ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆದರೆ, ಆ ಹಣವನ್ನು ಪಡೆಯುವುದು ಸವಾಲಾಗಿಯೇ ಉಳಿದಿತ್ತು.

ADVERTISEMENT

2021ರ ಕೇಂದ್ರ ಬಜೆಟ್‌ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌, 'ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾಯ್ದೆ (ಡಿಐಸಿಜಿಸಿ) 1961ಕ್ಕೆ ತಿದ್ದುಪಡಿ ತರುವ ಸಂಬಂಧ ಸರ್ಕಾರವು ಕಾರ್ಯೋನ್ಮುಖವಾಗಿದೆ. ತಿದ್ದುಪಡಿ ಅನುಮೋದನೆ ಬಳಿಕ ಠೇವಣಿದಾರರು ಅವರ ಹಣವನ್ನು ಸುಲಭವಾಗಿ ಮತ್ತು ನಿಗದಿತ ಸಮಯದೊಳಗೆ ಪಡೆಯಲು ಸಾಧ್ಯವಾಗಲಿದೆ' ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.