ನವದೆಹಲಿ: ಮುಂಬರುವ ತಿಂಗಳುಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ತಿಳಿಸಿದೆ.
ಉತ್ತಮ ಮುಂಗಾರಿನಿಂದ ಕೃಷಿ ಚಟುವಟಿಕೆಗಳು ಹೆಚ್ಚಳವಾಗಿವೆ. ಕನಿಷ್ಠ ಬೆಂಬಲ ದರವು ಏರಿಕೆಯಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹವು ಹೆಚ್ಚಳವಾಗಿದ್ದು, ಕೃಷಿ ಉತ್ಪಾದನೆಯಿಂದ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ. ಇದರಿಂದ ಹಣದುಬ್ಬರವು ಇಳಿಕೆಯಾಗಬಹುದು ಎಂದು ಅಕ್ಟೋಬರ್ ತಿಂಗಳ ಮಾಸಿಕ ವರದಿ ತಿಳಿಸಿದೆ.
ನವೆಂಬರ್ ಆರಂಭದಲ್ಲಿ ಪ್ರಮುಖ ಆಹಾರ ವಸ್ತುಗಳ ಬೆಲೆಯು ಇಳಿಕೆಯಾಗಿರುವುದನ್ನು ತೋರಿಸುತ್ತಿದೆ. ಆದರೂ, ಜಾಗತಿಕ ಅಂಶಗಳು ದೇಶೀಯ ಹಣದುಬ್ಬರ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
ವಿದೇಶಿ ನೇರ ಹೂಡಿಕೆಯ ಒಳಹರಿವು ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿದ್ದು, ₹5.46 ಲಕ್ಷ ಕೋಟಿ ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಳವಾಗಿದೆ. ತಯಾರಿಕಾ ವಲಯದಲ್ಲಿ ಉದ್ಯೋಗಗಳ ಹೆಚ್ಚಳ ಮತ್ತು ಸಂಘಟಿತ ವಲಯಗಳಿಗೆ ಯುವಜನರ ಸೇರ್ಪಡೆ ಏರಿಕೆಯಾಗಲಿದೆ. ಸೇವಾ ವಲಯವು ತನ್ನ ವೇಗವನ್ನು ಉಳಿಸಿಕೊಳ್ಳುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.