ಚಿತ್ರ:ಎಐ
ಇಂದಿನಿಂದ ಧನುರ್ಮಾಸ ಆರಂಭವಾಗಿದೆ. ಜ್ಯೋತಿಷದ ಪ್ರಕಾರ ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
ಸೂರ್ಯನಾರಾಯಣನು ಧನು ರಾಶಿಯನ್ನು ಪ್ರವೇಶಿಸುವ ಈ ಅವಧಿ ಅತ್ಯಂತ ಪವಿತ್ರ ಸಮಯವಾಗಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಒಂದು ತಿಂಗಳ ಕಾಲವೇ ಧನುರ್ಮಾಸ ಎಂದು ಹೇಳಲಾಗುತ್ತದೆ. ಮಾರ್ಗಶಿರದಲ್ಲಿ ಸೂರ್ಯನು ಧನುರಾಶಿಯಲ್ಲಿಇರುವುದರಿಂದ ಇದನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ.
ಈ ಮಾಸವು ಇತರೆ ಎಲ್ಲಾ ಮಾಸಗಳಿಗಿಂತ ಅತ್ಯಂತ ಶ್ರೇಷ್ಠ ಮಾಸವೆಂದು ಕರೆಯಲಾಗುತ್ತದೆ. ಸಾಮಗಳಲ್ಲಿ ಬೃಹತ್ ಸಾಮ, ಛಂದಸ್ಸುಗಳಲ್ಲಿ ಗಾಯಿತ್ರಿ, ಋತುಗಳಲ್ಲಿ ವಸಂತ ಋತು ನಾನೇ ಆಗಿರುವೆ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಪುರಾಣಗಳ ಪ್ರಕಾರ ದಕ್ಷಿಣಾಯನವೂ ದೇವತೆಗಳಿಗೆ ರಾತ್ರಿಯ ಕಾಲವೆಂದು ಹೇಳಲಾಗುತ್ತದೆ. ಈಗ ದಕ್ಷಿಣಾಯನ ಮುಗಿಯುತ್ತಿದ್ದು, ಸೂರ್ಯೋದಯಕ್ಕೆ ಅಂದರೆ ಸೂರ್ಯ ಉತ್ತರಾಯಣಕ್ಕೆ ಕಾಲಿಡುತ್ತಾನೆ ಎಂದು ಹೇಳಲಾಗುತ್ತದೆ.
ಈ ಮಾಸವನ್ನು ಶೂನ್ಯ ಮಾಸ ಅಥವಾ ಅಶುಭ ಮಾಸ ಎಂಬ ತಪ್ಪುಕಲ್ಪನೆ ಇದೆ. ಆದರೆ ಇದು ಜ್ಯೋತಿಷದ ಪ್ರಕಾರ ಸಮ್ಮತವಲ್ಲ.
ಪುರಾಣ ಕಥೆಗಳ ಪ್ರಕಾರ ಶ್ರೀ ಗೋಧಾದೇವಿಯು ಶ್ರೀರಂಗನಾಥನನ್ನು ವಿವಾಹವಾಗಬೇಕೆಂದು ಪಣತೊಟ್ಟಿದ್ದಳು. ಇದಕ್ಕಾಗಿ ಧನುರ್ಮಾಸದಲ್ಲಿ ಪ್ರತಿದಿನ ಮುಂಜಾನೆ ಎದ್ದು ವ್ರತ ಆಚರಿಸಿ ರಂಗನಾಥನನ್ನು ಪ್ರಾರ್ಥಿಸಿ ತಿರುಪಾವೈ ಪಾಶೂರಗಳನ್ನು ಹಾಡಿದ್ದಳು. ಆಕೆಯ ಭಕ್ತಿಗೆ ಮೆಚ್ಚಿ ರಂಗನಾಥನೇ ಆಕೆಯನ್ನು ವರಿಸಿದನು ಎಂದು ಹೇಳಲಾಗುತ್ತದೆ. ಆದ್ದರಿಂದ ಮದುವೆ ತಡವಾಗುತ್ತಿರುವ ಕನ್ಯೆಯರು ಈ ಮಾಸದಲ್ಲಿ ತಿರುಪಾವಾಯ್ ಪಾರಾಯಣ ಮಾಡಿದರೆ ಅಥವಾ ಕೇಳಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿಯಿಂದ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಹುಗ್ಗಿಯಲ್ಲಿ ಬಳಸುವ ಕರಿಮೆಣಸು, ಜೀರಿಗೆ, ಶುಂಠಿ ಮತ್ತು ತುಪ್ಪ ದೇಹಕ್ಕೆ ಉಷ್ಣತೆ ನೀಡಿ ಕಫ ಹಾಗೂ ಶೀತವನ್ನು ತಡೆಯುತ್ತದೆ. ಇದು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಂತ ಆಯುರ್ವೇದ ಪದ್ಧತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.