ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ತಾಲ್ಲೂಕು ಹೋರಾಟ ಸಮಿತಿ ನಿರ್ಧರಿಸಿದೆ.
ಪಟ್ಟಣದ ನೀಲಕಂಠೇಶ್ವರ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಕಳೆದ 1,236 ದಿನದಿಂದ ಅನಿರ್ದಿಷ್ಟ ಧರಣಿ ಕೈಗೊಂಡಿದ್ದರೂ ಸರ್ಕಾರ ತಾಲ್ಲೂಕು ರಚನೆಗೆ ಮುಂದಾಗುತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಮಹಾಲಿಂಗಪುರ ತಾಲ್ಲೂಕು ರಚನೆಯ ಮನವಿಯನ್ನು ವಿಲೇವಾರಿ ಮಾಡಿರುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ. ಇದನ್ನು ಖಂಡಿಸಿ, ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ’ ಎಂದರು.
‘ಉಸ್ತುವಾರಿ ಸಚಿವರು, ಶಾಸಕರು ತಾಲ್ಲೂಕು ರಚನೆಗೆ ಶಿಫಾರಸು ಪತ್ರ ನೀಡಿದ್ದಾರೆ. ಮುಖ್ಯಮಂತ್ರಿ ಭೇಟಿ ಮಾಡಿಸುವ ಭರವಸೆಯನ್ನು ಉಸ್ತುವಾರಿ ಸಚಿವರು ನೀಡಿದ್ದಾರೆ. ತಾಲ್ಲೂಕು ರಚನೆಗೆ ಮಹಾಲಿಂಗಪುರ ಅರ್ಹ ಇದೆಯೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಮುಖಂಡರು ತಿಳಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ಸಂಘದ ಸದಸ್ಯರು ತಾಲ್ಲೂಕು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಅರ್ಜುನ ಹಲಗಿಗೌಡರ, ಮಹಮ್ಮದ್ ಹೂಲಿಕಟ್ಟಿ, ಗಂಗಾಧರ ಮೇಟಿ, ಜಯರಾಮಶೆಟ್ಟಿ, ವೀರೇಶ ಆಸಂಗಿ ಮಾತನಾಡಿದರು.
ನಿಂಗಪ್ಪ ಬಾಳಿಕಾಯಿ, ಮಹಾದೇವ ಮಾರಾಪುರ, ಚನ್ನಪ್ಪ ಪಟ್ಟಣಶೆಟ್ಟಿ, ಆನಂದ ಹಟ್ಟಿ, ಮಲ್ಲಪ್ಪ ಸಿಂಗಾಡಿ, ಎಂ.ಆರ್.ತೇರದಾಳ, ಸುಭಾಷ ಶಿರಬೂರ, ಈರಣ್ಣ ಹಲಗತ್ತಿ, ಶ್ರೀಶೈಲ ಉಳ್ಳಾಗಡ್ಡಿ, ಸಿದ್ರಾಮ ಯರಗಟ್ಟಿ, ರಾಜು ತೇರದಾಳ, ಶಿವಲಿಂಗ ಟಿರಕಿ, ಚಂದ್ರಶೇಖರ ಹುಣಶ್ಯಾಳ, ಸಿದ್ದಪ್ಪ ಶಿರೋಳ, ಈಶ್ವರ ಮುರಗೋಡ ಇತರರು ಇದ್ದರು.
ಮಹಾಲಿಂಗಪುರ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹ ಮನವಿ ವಿಲೇವಾರಿಗೆ ಖಂಡನೆ ವಾರದೊಳಗೆ ಸಿ.ಎಂ ಜೊತೆ ಚರ್ಚೆ: ಭರವಸೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.