
ಹರಪನಹಳ್ಳಿ: ‘ಬಿಜೆಪಿ, ಜೆಡಿಎಸ್ ಪಕ್ಷಗಳು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳುತ್ತಾರೆ ಆದರೆ ನನ್ನ ಇಲಾಖೆಯಿಂದ ₹14 ಸಾವಿರ ಕೋಟಿ ಅನುದಾನದಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಅನುದಾನ ಆಕಾಶದಿಂದ ಇಳಿದು ಬಂದಿದೆಯಾ’ ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ಪ್ರಶ್ನಿಸಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತಾಲ್ಲೂಕು ಆಡಳಿತ, ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ₹ 54.72 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಶುದ್ದ ಕುಡಿಯುವ ನೀರಿನ ಘಟಕಗಳು, 87 ಸ್ಮಶಾನಗಳು, 889 ಜನರಿಗೆ ಕಿಟ್ ವಿತರಣೆ, ಆದೇಶ ಪತ್ರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬಿಜೆಪಿ ಅವರಂತೆ ನಾವು ಜಾತಿ ಮಾಡಲ್ಲ, ಸಂವಿಧಾನದ ಆಶಯದಂತೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ₹ 360 ಕೋಟಿ ಹಣ ಖರ್ಚು ಮಾಡಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹೊಸ ವಸತಿ ಬಡಾವಣೆ ಒಳಗೊಂಡು 22 ಕಿ.ಮೀ. ಪೈಪ್ ಲೈನ್ ಕಾಮಗಾರಿಗೆ ಹಾಗೂ ಯುಜಿಡಿ ವೈಜ್ಞಾನೀಕರಣಗೊಳಿಸಲು ₹ 61 ಕೋಟಿ, ಕೆರೆಗಳ ಸ್ವಚ್ಚಗೊಳಿಸಲು ₹ 63 ಕೋಟಿ ಅನುದಾನದ ಡಿಪಿಆರ್, ಹೊಸ ಬಸ್ ನಿಲ್ದಾಣ ಸೇರಿ ವಿವಿಧ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮುಂಜೂರು ಮಾಡಿಸಿಕೊಡಬೇಕು ಎಂದು ಸಚಿವ ಸುರೇಶ ಅವರಿಗೆ ಮನವಿ ಮಾಡಿದರು.
ಅಮೃತ್ 2.0 ಯೋಜನೆಯಡಿ ₹ 43.36 ಕೋಟಿ ವೆಚ್ಚದ ಸಗಟು ನೀರು ಸರಬರಾಜು ಯೋಜನೆ. ಚೆನ್ನಹಳ್ಳಿ ತಾಂಡದಲ್ಲಿ 5 ಕೋಟಿ ವೆಚ್ಚದಲ್ಲಿ ಜಿನುಗು ಕೆರೆ ನಿರ್ಮಾಣ. 4.56 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
889 ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಮೀನುಗಾರಿಕೆ ಇಲಾಖೆಯಿಂದ 25 ಜನರಿಗೆ ಮನೆ ನಿರ್ಮಾಣ ಅದೇಶ. ₹ 2 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳಿಗೆ ಚಾಲನೆ ನೀಡಲಾಯಿತು.
ತೆಗ್ಗಿನಮಠ ವರಸದ್ಯೋಜಾತ ಸ್ವಾಮೀಜಿ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯಶಂಕರ ಯಡಿಹಳ್ಳಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದ್ವಾರುಕೇಶ್, ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಮನೋಹರ, ಎಇಇ ಮಂಜುನಾಥ, ದ್ವಾರಕೇಶ್, ತಹಶೀಲ್ದಾರ ಬಿ.ವಿ.ಗಿರೀಶ ಬಾಬು, ರೇಣುಕಾ ಎಸ್.ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.