ಕಂಪ್ಲಿ: ಇಲ್ಲಿಯ ತಾಲ್ಲೂಕು ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಯಡಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಶಾಸಕ ಜೆ.ಎನ್. ಗಣೇಶ್ ಪ್ರಸ್ತುತ ಕಾರ್ಯವನ್ನು ಸಾಂಕೇತಿಕವಾಗಿ ಚಾಲನೆ ನೀಡಿ, ಸಾರ್ವಜನಿಕರ ಅಲೆದಾಟ ತಪ್ಪಿಸಲು ಸರ್ಕಾರ ಈ ಮಹತ್ತರ ಯೋಜನೆ ಜಾರಿ ಮಾಡಿದೆ. ಸಾರ್ವಜನಿಕರು ತಮ್ಮ ಡಿಜಿಟಲ್ ಮಾಧ್ಯಮದ ಮೂಲಕ ಭೂ ದಾಖಲೆಗಳನ್ನು ಇದ್ದಲ್ಲಿಯೇ ಪಡೆಯಬಹುದು ಎಂದರು.
ತಹಶೀಲ್ದಾರ್ ಎಸ್. ಶಿವರಾಜ ಮಾತನಾಡಿ, ಭೂ ದಾಖಲೆ ಡಿಜಿಟಲೀಕರಣದಿಂದ. ದಾಖಲೆಗಳು ಶಾಶ್ವತ ಮತ್ತು ಸುಭದ್ರವಾಗಲಿದ್ದು, ಸುಲಭವಾಗಿ ದೊರಕಲಿವೆ. ದಾಖಲೆಗಳನ್ನು ತಿದ್ದಲು, ಕಳೆಯಲು ಸಾಧ್ಯವಿಲ್ಲ ಎಂದರು.
ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ, ಶಿರಸ್ತೇದಾರ್ ಎಸ್.ಡಿ. ರಮೇಶ, ಕಂದಾಯ ನಿರೀಕ್ಷಕ ಜಗದೀ±, ಕಚೇರಿ ಸಿಬ್ಬಂದಿ, ಅಧಿಕಾರಿಗಳು ಹಾಜರಿದ್ದರು.
ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ 20 ಎಕರೆ ಮೀಸಲು:
ಕಂಪ್ಲಿ ಕ್ಷೇತ್ರ ಬೈಲೂರಿನಲ್ಲಿ ಎಂಜನಿಯರಿಂಗ್ ಕಾಲೇಜು ಸ್ಥಾಪನೆಗೆ 20 ಎಕರೆ ಭೂಮಿ ಮೀಸಲಿಟ್ಟಿದ್ದು, ಬಜೆಟ್ನಲ್ಲಿ ಹಣ ಮೀಸಲಿರಿಸಲು ಸಿಎಂ, ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದೇನೆ. ಇಲ್ಲಿಯ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣಕ್ಕೂ ಅನುದಾನ ಮೀಸಲಿರಿಸುವಂತೆಯು ಕೋರಿದ್ದೇನೆ. ಗಂಗಾವತಿ-ಕಂಪ್ಲಿ-ದರೋಜಿ ರೈಲ್ವೆ ಲೈನ್ ಕಾಮಗಾರಿಗೆ ಹಣ ಬಿಡುಗಡೆಗೆ ರೈಲ್ವೆ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಮತ್ತು ಮುಖ್ಯಮಂತ್ರಿಗಳ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೆ ಅಂತಿಮ. ಸಚಿವ ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣಕ್ಕೆ ನಾನು ಸೇರಿಲ್ಲ. ನನ್ನದು ಕಾಂಗ್ರೆಸ್ ಬಣ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ನಾನು ಸಚಿವ ಆಕಾಂಕ್ಷಿಯಾಗಿದ್ದೇನೆ. ಸಂಪುಟ ಪುನರ್ ರಚನೆಯಲ್ಲಿ ನನಗೆ ಆದ್ಯತೆ ನೀಡುವ ವಿಶ್ವಾಸವಿದೆ. ಹಂಪಿ ಉತ್ಸವದ ನಂತರ ಮಾರ್ಚ್ ಒಳಗೆ ಕಂಪ್ಲಿ ಉತ್ಸವ ನಡೆಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಕೆ.ಎಸ್. ಚಾಂದ್ಬಾಷ, ಮುಖಂಡರಾದ ಬಿ. ನಾರಾಯಣಪ್ಪ, ಕೆ. ಮಸ್ತಾನ್ವಲಿ, ಜಾಫರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.