ADVERTISEMENT

ಬಳ್ಳಾರಿ: ಶೇ 57.51ರಷ್ಟು ಪಠ್ಯ ಪುಸ್ತಕ ಪೂರೈಕೆ

ಶಾಲೆಗಳು ಆರಂಭವಾಗುವ ಮೇ 29ರಂದು ವಿದ್ಯಾರ್ಥಿಗಳಿಗೆ ವಿತರಣೆ

ಆರ್. ಹರಿಶಂಕರ್
Published 22 ಮೇ 2025, 7:39 IST
Last Updated 22 ಮೇ 2025, 7:39 IST
ಉಮಾದೇವಿ 
ಉಮಾದೇವಿ    

ಬಳ್ಳಾರಿ: ರಾಜ್ಯ ಸರ್ಕಾರವು 2025–26ನೇ ಶೈಕ್ಷಣಿಕ ಸಾಲಿನಲ್ಲಿ ಮೇ 29ರಿಂದ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಭರದ ಸಿದ್ಧತೆಗಳು ಶುರುವಾಗಿವೆ. 

ಕರ್ನಾಟಕ ಪಠ್ಯಪುಸ್ತಕ ಸಂಘವು ಬಳ್ಳಾರಿ ಜಿಲ್ಲೆಗೆ ಈಗಾಗಲೇ ಶೇ 57.51ರಷ್ಟು ಪಠ್ಯ ಪುಸ್ತಕಗಳನ್ನು ಪೂರೈಸಿದೆ. ಇದರಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಪಠ್ಯ ಪುಸ್ತಕಗಳು ಸೇರಿವೆ. ಇನ್ನು ಎರಡ್ಮೂರು ದಿನಗಳಲ್ಲಿ ಉಳಿದ ಶೇ. 42ರಷ್ಟು ಪುಸ್ತಕಗಳೂ ಜಿಲ್ಲೆಗೆ ಬಂದು ಸೇರಲಿವೆ. 

ಲಭ್ಯ ಪುಸ್ತಕಗಳನ್ನು ಈಗಾಗಲೇ ತಾಲ್ಲೂಕುವಾರು ಕಳುಹಿಸಲಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕ ವಿತರಣೆ ಜವಾಬ್ದಾರಿ ವಹಿಸಲಾಗಿದೆ. ಮೇ 29ರಂದು ವಿತರಣಾ ಪ್ರಕ್ರಿಯೆಯನ್ನು ನಡೆಸಲು ನಿರ್ದೇಶನ ನೀಡಲಾಗಿದೆ. ವಿಷಯವಾರು ಪುಸ್ತಗಳನ್ನು ಹಂಚಲು ತಿಳಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.  

ADVERTISEMENT

ಮೇ 29ರಂದು ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಆಚರಿಸುತ್ತಿರುವ ಕಾರಣ ಅದೇ ದಿನ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಪುಸ್ತಕಗಳನ್ನು ಅತ್ಯಂತ ಜೋಪಾನವಾಗಿ ನೊಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ)ಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಬಿ. ಉಮಾದೇವಿ ಸಲಹೆ ನೀಡಿದ್ದಾರೆ. 

ಇದರ ಜತೆಗೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಮವಸ್ತ್ರಗಳ ಪೂರೈಕೆಯನ್ನು ಸರ್ಕಾರ ಆರಂಭಿಸಿದೆ. ಈಗಾಗಲೇ ಕೆಲವು ಲೋಡ್‌ಗಳು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   

ಹಲವು ಜಿಲ್ಲೆಗಳಲ್ಲಿ ಪಠ್ಯ ಪುಸ್ತಕ ಹಂಚಿಕೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪಠ್ಯ ಪುಸ್ತಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಶಾಲೆ ಆರಂಭವಾಗುವ ಮೇ 29ರೊಳಗೆ ಪುಸ್ತಕ ವಿತರಣೆ ಮುಗಿದಿರಬೇಕು ಎಂದು ಬಿಇಒಗಳಿಗೆ ಸೂಚನೆ ನೀಡಿರುವುದು ಗೊತ್ತಾಗಿದೆ. 

ಖಾಸಗಿಯವರಿಗೆ ಶುಲ್ಕ: ಪಠ್ಯ ಪುಸ್ತಕಗಳನ್ನು ಸರ್ಕಾರದ ಎಲ್ಲ ಶಾಲೆಗಳಿಗೆ ತಲುಪಿಸಲಾಗುತ್ತದೆ. ಆಸಕ್ತ ಅನುದಾನ ರಹಿತ ಖಾಸಗಿ ಸಂಸ್ಥೆಗಳವರು ಶೇ 10ರ ಶುಲ್ಕ ಭರಿಸಿ, ಬೇಡಿಕೆ ಸಲ್ಲಿಸಿದರೆ ಅವರಿಗೂ ಪುಸ್ತಕಗಳನ್ನು ಪೂರೈಸಲಾಗುತ್ತದೆ. ಆಯಾ ಬ್ಲಾಕ್‌ ಹಂತದ ನೋಡಲ್‌ ಅಧಿಕಾರಿಗಳ ಬಳಿ ಖಾಸಗಿ ಶಾಲೆಗಳವರು ಖರೀದಿಸಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಶುಲ್ಕ ನಿಗದಿಪಡಿಸಿದೆ. ಅದನ್ನು ಆನ್‌ಲೈನ್‌ನಲ್ಲಿಯೇ ಭರಿಸಿ ಪಠ್ಯ ಪುಸ್ತಕಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.

ಅನುದಾನ ರಹಿತ ಶಾಲೆಗಳು ಈಗಾಗಲೇ ಶೇ 65ರಷ್ಟು ಪುಸ್ತಗಳನ್ನು ಖರೀದಿಸಿವೆ ಎಂದು ಗೊತ್ತಾಗಿದೆ. 

ಸುರಕ್ಷಿತವಾಗಿಡಲು ಸೂಚನೆ 

ಪೂರೈಸಲಾಗುವ ಪುಸ್ತಕ ಮತ್ತು ಸಮವಸ್ತ್ರಗಳನ್ನು ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಮಳೆ ಆರಂಭವಾಗಿದ್ದು ನೀರು ಬಿದ್ದು ಹಾಳಾಗದಂತೆ ಕೆಳಹಂತದ ಅಧಿಕಾರಿಗಳಿಗೆ ತಿಳಿಸಲಾಗಿದೆ. ದಾಸ್ತಾನು ಇರುವ ಜಾಗದಲ್ಲಿ ಅಗ್ನಿ ನಂದಕ ಸಿಸಿಟಿವಿ ಕ್ಯಾಮೆರಾ ಕಾವಲುಗಾರರು ಇರಬೇಕು ಎಂದು ಇಲಾಖೆಯೇ ಸುತ್ತೋಲೆಯಲ್ಲಿ ಹೇಳಿದೆ. ಅದ್ದರಿಂದ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇವೆ ಎಂದು ಡಿಡಿಪಿಐ ಉಮಾದೇವಿ ತಿಳಿಸಿದರು. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ಕ್ಕೆ ಸಿದ್ಧತೆ 

ಎಸ್‌ಎಸ್‌ಎಲ್‌ಸಿಯ ಎರಡನೇ ಪರೀಕ್ಷೆಯು ಮೇ 26ರಿಂದ ಜೂನ್ 2ರವರೆಗೆ ನಡೆಯುತ್ತಿದೆ. ಜಿಲ್ಲೆಯಲ್ಲಿ 7999 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ತರಬೇತಿ ವಿಶೇಷ ತರಗತಿಗಳು ನಡೆಯುತ್ತಿವೆ. ಹತ್ತಿರದ ಶಾಲೆಗಳಿಗೆ ಅವರನ್ನು ನಿಯೋಜಿಸಲಾಗಿದೆ. ಆದರೆ ನಗರ ಪ್ರದೇಶದಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಮಾತ್ರ ವಿಶೇಷ ತರಗತಿಗಳಿಗೆ ಬರುತ್ತಿದ್ದಾರೆ ಎಂದು ಗೊತ್ತಾಗಿದೆ. ಒಟ್ಟಾರೆ ಸರಾಸರಿ ಶೇ 60ರಷ್ಟು ವಿದ್ಯಾರ್ಥಿಗಳಷ್ಟೇ ವಿಶೇಷ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.