
ಹೊಸಕೋಟೆ: ಹೊಸಕೋಟೆ ನಗರದ ಸಮೀಪ ಇರುವ ಉಪ್ಪಾರಹಳ್ಳಿ ಗ್ರಾಮದಲ್ಲಿ ಮದ್ದೂರಮ್ಮದೇವಿ, ಚೌಡೇಶ್ವರಮ್ಮ ದೇವಿಯ ದನಗಳ ಜಾತ್ರೆ ನಡೆಯಿತು.
ರಾಸು ಪ್ರದರ್ಶನದಲ್ಲಿ ಎಂ.ಸತ್ಯವಾರ ಮುನಿರಾಜು ಅವರ ರಾಸು ಪ್ರಥಮ, ಕುರುಬರ ಪೇಟೆ ವೆಂಕಟೇಶ್ ಅವರ ರಾಸು ದ್ವಿತೀಯ, ಮೈಲಾಪುರ ನಾಗೇಶ್ ಅವರ ರಾಸು ತೃತೀಯ ಸ್ಥಾನ ಪಡೆಯಿತು. ಕ್ರಮವಾಗಿ ₹10 ಸಾವಿರ, ₹7.5 ಸಾವಿರ, ₹5 ಸಾವಿರ ಬಹುಮಾನ ಹಾಗೂ ಪ್ರಶಂಸಾ ಪತ್ರ ವಿತರಿಸಲಾಯಿತು.
ರೇಷ್ಮೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಪಿಎಂಸಿ , ಆರೋಗ್ಯ ಮತ್ತು ಪಶುವೈದ್ಯಇಲಾಖೆ ಹಾಗೂ ಕೃಷಿ ಇಲಾಖೆಗಳಿಂದ ವಸ್ತು ಪ್ರದರ್ಶನ ನಡೆಯಿತು.
ಇದೇ ವೇಳೆ ಮಾತನಾಡಿದ ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಗ್ರಾಮೀಣ ಭಾಗದ ಜನರ ಜೀವನಾಡಿ ಕೃಷಿ ಮತ್ತು ಹೈನೋದ್ಯಮ ಹೊಸ ಆವಿಷ್ಕಾರದಿಂದ ಉದ್ಯಮವಾಗಿ ರೂಪುಗೊಂಡಿದೆ. ಹೈನೋದ್ಯಮದಲ್ಲಿ ಬಡ ಮತ್ತು ಮಾಧ್ಯಮ ಕುಟುಂಬಗಳು ಹೆಚ್ಚು ಸಕ್ರಿಯಗೊಳ್ಳಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿಎನ್.ಗೋಪಾಲಗೌಡ, ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣರು ಕೃಷಿ ಹೈನುಗಾರಿಕೆಯಿಂದ ವಿಮುಖಗೊಳ್ಳುತ್ತಿದ್ದು, ದನಗಳ ಜಾತ್ರೆ ತನ್ನ ವೈಭವ ಕಳೆದುಕೊಳ್ಳುತ್ತಿದೆ. ಇನ್ನು ಕೃಷಿಯಲ್ಲಂತೂ ಮಿಶ್ರ ತಳಿಗಳ ಬೇಸಾಯದಿಂದ ತಿನ್ನುವ ಆಹಾರದಲ್ಲೂ ಪೌಷ್ಟಿಕಾಂಶ ಇಲ್ಲದಾಗಿದೆ ಎಂದು ಬೇಸರಿಸಿದರು.
ಮದ್ದೂರಮ್ಮ ದೇವಿ ಜಾತ್ರೆ ಆಚರಣೆ ಸಮಿತಿ ಧರ್ಮದರ್ಶಿ ಸಿ.ಮುನಿಯಪ್ಪ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಉಪ್ಪಾರಹಳ್ಳಿಯ ಮದ್ದೂರಮ್ಮ ದೇವಿ ಹಾಗೂ ಚೌಡೇಶ್ವರಮ್ಮದೇವಿ ದೇವಾಲಯ ಉದ್ಘಾಟಿಸಿದರು. ನಂತರದ ದಿನಗಳಲ್ಲಿ ಗ್ರಾಮಕ್ಕೆ ಒಮ್ಮೆ ಪ್ಲೇಗ್ ಬಂದಿತ್ತು. ಅಂತಹ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ರೋಗ ವಾಸಿಯಾದರೆ ಜಾತ್ರೆ ಮಾಡುವುದಾಗಿ ದೇವರಲ್ಲಿ ಬೇಡಿಕೊಂಡಿದ್ದರಂತೆ ಅಂದಿನಿಂದಲೂ ಜಾತ್ರೆಯನ್ನು ಮಾಡಿಕೊಂಡು ಬಂದಿದ್ದೇವು ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್, ಗ್ರಾ.ಪಂ ಅಧ್ಯಕ್ಷೆ ಬಿಂದುಅಶೋಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶ್ರಿನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.