ಬೆಳಗಾವಿ: ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾದವರು ಬೆಳಗಾವಿಯಲ್ಲಿ ಹಿಂದಿನಿಂದಲೂ ಗೂಂಡಾಗಿರಿ ಮತ್ತು ದಾದಾಗಿರಿ ನಡೆಸಿದ್ದಾರೆ. ಗಡಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ, ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಈ ಕುರಿತು ನಮ್ಮ ಸರ್ಕಾರದಿಂದಲೂ ಪುಸ್ತಕ ಹೊರತರಬೇಕು’ ಎಂದು ಕನ್ನಡ ಹೋರಾಟಗಾರ ಮೆಹಬೂಬ ಮಕಾನದಾರ ಒತ್ತಾಯಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಅವರು, ‘ಎಂಇಎಸ್ ಹಾಗೂ ಶಿವಸೇನಾದವರು ಸಂಘರ್ಷ ನಡೆಸಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯಿಂದ ಪುಸ್ತಕ ಬಿಡುಗಡೆ ಮಾಡಿಸಿದ್ದಾರೆ. ಸುಳ್ಳಿನ ಸರಮಾಲೆಯೇ ಆ ಪುಸ್ತಕದಲ್ಲಿದೆ. ಎಂಇಎಸ್ ಹಾಗೂ ಶಿವಸೇನಾ ನಾಯಕರು ಇಲ್ಲಿ ಯಾವ ರೀತಿ ಪುಂಡಾಟಿಕೆ ನಡೆಸಿದ್ದಾರೆ ಎನ್ನುವ ಬಗ್ಗೆ ಪುಸ್ತಕ ಹೊರತರಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದಲ್ಲಿ ಬಂದಿರುವ ಪುಸ್ತಕ ಅಧಿಕೃತ ಎಂಬ ಸಂದೇಶ ಹೋಗುತ್ತದೆ’ ಎಂದು ತಿಳಿಸಿದರು.
‘ಇಲ್ಲಿನ ಕನ್ನಡ ಹೋರಾಟಗಾರರ ಬಳಿ ಅನೇಕ ಸಾಕ್ಷಿ ಹಾಗೂ ದಾಖಲೆಗಳಿವೆ. ಅವುಗಳನ್ನು ಬಳಸಿಕೊಂಡು ‘ಎಂಇಎಸ್ ಕಿತಾಪತಿ’ ಎನ್ನುವ ಪುಸ್ತಕ ಹೊರತರಬೇಕು. ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ನೋಡಲ್ ಅಧಿಕಾರಿ ನೇಮಿಸಬೇಕು. ಗಡಿಯಲ್ಲಿ ಮರಾಠಿ ಭಾಷಿಗರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.