ADVERTISEMENT

ಬೆಂಗಳೂರು ನಗರದಲ್ಲಿ ಮೈ ಕೊರೆಯುವ ಚಳಿ: ಬೆಚ್ಚನೆಯ ಉಡುಪಿನ ಮೊರೆ ಹೋದ ಜನರು

15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ವರದಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 16:02 IST
Last Updated 12 ಡಿಸೆಂಬರ್ 2025, 16:02 IST
ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿ ಕಾಯಿಸುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)
ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿ ಕಾಯಿಸುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಶೀತ ಗಾಳಿ ಹಾಗೂ ತಾಪಮಾನ ಕುಸಿತದಿಂದ ನಗರದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದ್ದು, ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋಗಲಾರಂಭಿಸಿದ್ದಾರೆ. 

ಮುಂಜಾನೆ ಅವಧಿಯಲ್ಲಿ ವಾತಾವರಣದಲ್ಲಿ ಮಂಜು ಕವಿಯುತ್ತಿದೆ. ಇದರಿಂದಾಗಿ ಸಹಜವಾಗಿ ಚಳಿ ಹೆಚ್ಚಿ, ಹೊರಗಡೆ ಓಡಾಟ ಕಷ್ಟಸಾಧ್ಯವಾಗುತ್ತಿದೆ. ಕಳೆದೊಂದು ವಾರದಿಂದ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗುತ್ತಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತವಾಗಿದೆ. ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗುತ್ತಿದೆ. ಹಗಲಿನ ಹೊತ್ತು ಕೂಡ ತೇವಾಂಶಯುಕ್ತ ಗಾಳಿಯಿಂದಾಗಿ ಚಳಿ ಇರುವ ಕಾರಣ, ಜನರು ಸ್ವೆಟರ್‌, ಜಾಕೆಟ್‌ ಧರಿಸಿಕೊಂಡಿರುವುದು ಸಾಮಾನ್ಯವಾಗಿದೆ. 

ಚಳಿಯ ಕಾರಣ ಮಕ್ಕಳು ಮತ್ತು ವೃದ್ಧರು ಕೂಡ ಮನೆಯ ಹೊರಗಡೆ ಅಷ್ಟಾಗಿ ಬರುತ್ತಿಲ್ಲ. ಮುಂಜಾನೆ ಅವಧಿಯಲ್ಲಿ ಉದ್ಯಾನಗಳಿಗೆ ವಾಯುವಿಹಾರಕ್ಕೆ ತೆರಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 

ADVERTISEMENT

ನವೆಂಬರ್ ಕೊನೆಯ ವಾರದಿಂದಲೇ ನಗರದಲ್ಲಿ ಚಳಿ ಕಾಣಿಸಿಕೊಂಡಿತ್ತು. ಆ ವೇಳೆ ಕನಿಷ್ಠ ಉಷ್ಣಾಂಶ 18.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಶೀಲಂಕಾದ ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದ ‘ದಿತ್ವಾ’ ಚಂಡಮಾರುತವು ತಮಿಳುನಾಡಿನ ಕರಾವಳಿಯ ಬಳಿ ತಲುಪಿದ ಪರಿಣಾಮ, ಗರಿಷ್ಠ ಉಷ್ಣಾಂಶದಲ್ಲಿಯೂ ಕುಸಿತವಾಗಿತ್ತು. 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶ 14.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.  

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದ ಅವಧಿಯಲ್ಲಿ ತಾಪಮಾನವು ಇನ್ನಷ್ಟು ಕುಸಿತವಾಗುವ ಸಾಧ್ಯತೆಯಿದೆ. ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗುವ ಸಂಭವವಿದೆ. ಒಂದು ವೇಳೆ ಇಷ್ಟು ಪ್ರಮಾಣಕ್ಕೆ ಕುಸಿತವಾದರೆ, 2016ರ ನಂತರ ಡಿಸೆಂಬರ್‌ ತಿಂಗಳಲ್ಲಿ ನಗರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಲಿದೆ. 2016ರ ಡಿ.11ರಂದು ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗಿತ್ತು. 

ಹವಾಮಾನ ಇಲಾಖೆಯಿಂದ ಸಲಹೆ

*ಶೀತ ಅಲೆಯ ಪ್ರಭಾವದಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುವಿಕೆ ಗಟ್ಟಿಯಾಗುವಿಕೆ ಮರಗಟ್ಟುವಿಕೆ ಮತ್ತು ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಇದು ಗ್ಯಾಂಗ್ರೀನ್ ಎಂದು ಕರೆಯಲ್ಪಡುವ ಗಂಭೀರ ಸ್ಥಿತಿಯಾಗಿದ್ದು ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ

*ಶೀತ ಅಲೆಯ ಪ್ರಭಾವದಿಂದ ದೇಹದ ಉಷ್ಣತೆ ಇಳಿದು ನಡುಕ ಮಾತನಾಡಲು ತೊಂದರೆ ನಿದ್ರಾಹೀನತೆ ಸ್ನಾಯುಗಳ ಬಿಗಿತ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಗಂಭೀರ ಸ್ವರೂಪಕ್ಕೆ ತಿರುಗಿದರೆ ವೈದ್ಯರನ್ನು ಭೇಟಿ ಮಾಡಿ

*ದೇಹದ ಉಷ್ಣತೆ ಕಾಯ್ದುಕೊಳ್ಳಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಶೀತ ಗಾಳಿ ಬೀಸುವ ಸಂದರ್ಭದಲ್ಲಿ ಆದಷ್ಟು ಮನೆಯ ಒಳಗಡೆಯೇ ಇರಿ

*ದೇಹದ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವಿಸಿ. ನಿಯಮಿತವಾಗಿ ಬಿಸಿ ಪಾನೀಯ ಕುಡಿಯಿರಿ *ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.