ADVERTISEMENT

ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 4:02 IST
Last Updated 12 ಮಾರ್ಚ್ 2024, 4:02 IST
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ರಾತ್ರಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಗೆ ಸೌಮ್ಯಾ ರೆಡ್ಡಿ ಅವರ ತಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕರೆಸಿಕೊಂಡ ‘ಕೈ’ ನಾಯಕರು ಈ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ

‘ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದ ಸಮೀಕ್ಷೆಯಲ್ಲಿ ಸೌಮ್ಯಾ ಅವರ ಹೆಸರು ಮುಂಚೂಣಿಯಲ್ಲಿದೆ.‌ ಬೇರೆ ಆಕಾಂಕ್ಷಿಗಳಿಗಿಂತಲೂ ಸೌಮ್ಯಾ ಅವರೇ ಸೂಕ್ತ ಎಂದು ಗೊತ್ತಾಗಿದೆ. ಹೀಗಾಗಿ ನಿಮ್ಮ ಮಗಳೇ ದಕ್ಷಿಣಕ್ಕೆ ಸೂಕ್ತ’ ಎಂದು ರಾಮಲಿಂಗಾರೆಡ್ಡಿ ಅವರಿಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ADVERTISEMENT

ಆದರೆ, ಈ ವೇಳೆ ಮಗಳನ್ನು ಕಣಕ್ಕಿಳಿಸುವ ಸಂಬಂಧ ರಾಮಲಿಂಗಾ ರೆಡ್ಡಿ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ‌.‌ ಆಗ ಕಾಂಗ್ರೆಸ್ ನಾಯಕರು, ‘ಇದರಲ್ಲಿ ಯೋಚನೆ ಮಾಡುವುದು ಏನೂ ಇಲ್ಲ.‌ ಅವರೇ ಅಭ್ಯರ್ಥಿ ಆಗಲಿ’ ಎಂದಿದ್ದಾರೆ. ಎರಡು ದಿನ ಸಮಯಾವಕಾಶ ನೀಡುವಂತೆ ಹೇಳಿ ಸಭೆಯಿಂದ ರಾಮಲಿಂಗಾರೆಡ್ಡಿ ತೆರಳಿದ್ದಾರೆ.

ಸಭೆಗೆ ಸಚಿವ ಸತೀಶ ಜಾರಕಿಹೊಳಿ‌ ಅವರನ್ನೂ ಕರೆಸಿಕೊಂಡು ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ಬೆಳಗಾವಿಯಿಂದ ಸತೀಶ ಜಾರಕಿಹೊಳಿ‌ ಅಥವಾ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕೆಂದು ಚರ್ಚೆ ನಡೆದಿದೆ. ಚಿಕ್ಕೋಡಿಯಿಂದ ಲಕ್ಷ್ಮಣರಾವ್ ಚಿಂಗಳೆ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವುದಾಗಿ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ. ಆದರೆ‌, ಚಿಂಗಳೆ ಬದಲು ಪ್ರಿಯಾಂಕಾ ಜಾರಕಿಹೊಳಿ‌ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸುರ್ಜೇವಾಲಾ ಅವರು ಸಭೆಯಲ್ಲಿ ಒಲವು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಜಯಪ್ರಕಾಶ್ ಹೆಗ್ಡೆ ಇಂದು ಕಾಂಗ್ರೆಸ್‌ಗೆ: ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ತ್ಯಜಿಸಿ, ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ‘ಕೈ’ ಹಿಡಿಯಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಲಿರುವ ಹೆಗ್ಡೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯು ವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಹೆಗ್ಡೆ ಅವರಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.