ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಮೂಲಕ ಅನುದಾನ, ಖಾತರಿಗಳ ಭರಪೂರ ಕೊಡುಗೆ ಪಡೆದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತನ್ನ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ‘ರೂಪುರೇಷೆಗಳ ಬಜೆಟ್’ ಮಂಡನೆಗೆ ಸಿದ್ಧಗೊಳ್ಳುತ್ತಿದೆ.
ರಾಜ್ಯ ಬಜೆಟ್ನಿಂದ ₹4 ಸಾವಿರ ಕೋಟಿ ಅಧಿಕ ಅನುದಾನವನ್ನು 2025–26ನೇ ಸಾಲಿನಿಂದ ಪಡೆಯಲಿರುವ ಬಿಬಿಎಂಪಿ, ಅದನ್ನು ಯಾವ ಯೋಜನೆಗಳಿಗೆ ವಿನಿಯೋಗಿಸಲಿದೆ, ₹19 ಸಾವಿರ ಕೋಟಿ ಖಾತರಿ ಪಡೆದಿರುವ ಸುರಂಗ ರಸ್ತೆ ಯೋಜನೆಯ ಅನುಷ್ಠಾನದ ವಿಧಾನ ಹೇಗೆ ಎಂಬ ಮಾಹಿತಿ ಬಿಬಿಎಂಪಿಯ 2025–26ನೇ ಸಾಲಿನ ಬಜೆಟ್ ಸ್ಪಷ್ಟಪಡಿಸಲಿದೆ. ಹೀಗಾಗಿ, ಬಿಬಿಎಂಪಿ ಬಜೆಟ್ ಸುಮಾರು ₹18 ಸಾವಿರ ಕೋಟಿಗಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಸುರಂಗ ರಸ್ತೆ ನಿರ್ಮಾಣ, ಬೃಹತ್ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ನಗರದಲ್ಲಿ ಸುಗಮ ಸಂಚಾರಕ್ಕೆ 16 ಮೇಲ್ಸೇತುವೆ/ ಅಂಡರ್ಪಾಸ್ಗಳನ್ನು ನಿರ್ಮಿಸುವ ಸುಮಾರು ₹54 ಸಾವಿರ ಕೋಟಿ ವೆಚ್ಚದ ಕಾರ್ಯಸಾಧ್ಯತಾ ವರದಿಯೂ ‘ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ ಯೋಜನೆ’ ಸಿದ್ಧವಾಗಿದೆ.
ಈ ಯೋಜನೆಗಳೂ ಸೇರಿದಂತೆ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿಯ 21 ಯೋಜನೆಗಳಿಗೆ ಅನುದಾನ ಹಾಗೂ ನಗರದ ಮೂಲಸೌಕರ್ಯ ಯೋಜನೆಗಳನ್ನು ಅವುಗಳ ಶೀರ್ಷಿಕೆ ಹಾಗೂ ಅನುಷ್ಠಾನ ನಿರ್ದಿಷ್ಟ ಪ್ರದೇಶಗಳನ್ನೂ ಬಿಬಿಎಂಪಿ ಬಜೆಟ್ ಸೂಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಅತಿದೊಡ್ಡ ಯೋಜನೆ ಎಂದೇ ಪರಿಗಣಿಸಲಾಗಿರುವ ಸುಮಾರು ₹40 ಸಾವಿರ ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆ ಬಗ್ಗೆ ಹಲವು ರೀತಿಯ ಸಂದೇಹಗಳು ನಾಗರಿಕರ ವಲಯದಲ್ಲಿ ಇವೆ. ಈ ಯೋಜನೆ ಅನುಷ್ಠಾನವಾಗುವ ಪ್ರಕ್ರಿಯೆಗಳ ಬಗ್ಗೆ ಗೊಂದಲವೂ ಇದೆ. ಇದಕ್ಕೆಲ್ಲ ಪರಿಹಾರ ನೀಡಿ, ಸ್ಪಷ್ಟ ರೂಪುರೇಷೆಯನ್ನು ಬಜೆಟ್ ನೀಡಲಿದೆ.
ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಿದ್ದರೂ ಸುರಂಗ ರಸ್ತೆಯ ಉತ್ತರ–ದಕ್ಷಿಣ ಕಾರಿಡಾರ್ಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಾಲ್ಕಾರು ತಿಂಗಳಿಂದ ಮುಂದೂಡಲಾಗುತ್ತದೆ. ಈಗ ಬಜೆಟ್ ನಂತರವೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಬೃಹತ್ ಯೋಜನೆಗಳಿಗೆ ಅನುಷ್ಠಾನ ಹಾಗೂ ನಿರ್ವಹಣೆಗೆ ‘ವಿಶೇಷ ಉದ್ದೇಶಿತ ಸಂಸ್ಥೆ’ (ಎಸ್ಪಿವಿ) ಸ್ಥಾಪಿಸುವುದಾಗಿ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ, ಯಾವ ಯೋಜನೆಗಳು ಎಸ್ಪಿವಿ ಅಡಿಯಲ್ಲಿ ನಿರ್ವಹಣೆಯಾಗಲಿವೆ, ಎಸ್ಪಿವಿಯ ಕಾರ್ಯವಿಧಾನವನ್ನೂ ಬಿಬಿಎಂಪಿ ಬಜೆಟ್ ನಿರ್ಧರಿಸಲಿದೆ.
20ರಂದು ಮಂಡನೆ?: ಬಿಬಿಎಂಪಿ ಬಜೆಟ್ ಸಿದ್ಧತೆ ಅಂತಿಮ ಹಂತದಲ್ಲಿ, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಸಲಹೆಯನ್ನು ಪಡೆಯುವುದಷ್ಟೇ ಬಾಕಿ ಉಳಿದಿದೆ. ಇದಾದ ನಂತರ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಬಜೆಟ್ ಅಂತಿಮಗೊಳ್ಳಲಿದೆ ಎನ್ನಲಾಗಿದೆ.
ಮಾರ್ಚ್ 30 ಮತ್ತು 31ರಂದು ಸರ್ಕಾರಿ ರಜೆ ಇರುವುದರಿಂದ ಮಾರ್ಚ್ 29ರೊಳಗೆ ಬಿಬಿಎಂಪಿ ಬಜೆಟ್ಗೆ ಸರ್ಕಾರದಿಂದ ಅನುಮೋದನೆ ದೊರೆಯಬೇಕಿದೆ. ಹೀಗಾಗಿ, ಮಾರ್ಚ್ 20 ಅಥವಾ 21ರಂದು ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ರಾಜ್ಯ ಸರ್ಕಾರದಿಂದ ‘ಆರ್ಥಿಕ ಬಲ’ ಪಡೆದಿರುವ ಬಿಬಿಎಂಪಿ, ನಗರದ ಜನರಿಗೆ ಪ್ರಿಯವಾದ ಬಜೆಟ್ ಮಂಡಿಸುವ ಆಶಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಅಂತಿಮ ತಯಾರಿಯಲ್ಲಿದೆ: ಹರೀಶ್
‘ಬಿಬಿಎಂಪಿ ಬಜೆಟ್ಗೆ ತಯಾರಿ ಅಂತಿಮ ಹಂತದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರದ ಸಚಿವರು ಹಾಗೂ ಶಾಸಕರೊಂದಿಗೆ ಈ ವಾರದಲ್ಲಿ ಮಾತುಕತೆ ನಡೆಸಲಾಗುತ್ತದೆ. ನಾಗರಿಕರಿಂದಲೂ ಈಗಾಗಲೇ ಸಲಹೆಗಳನ್ನು ಸ್ವೀಕರಿಸಲಾಗಿದೆ. ನಗರದಲ್ಲಿ ಮುಂದಿನ ವರ್ಷ ಕೈಗೊಳ್ಳುವ ಯೋಜನೆಗಳಿಗೆ ಸ್ವರೂಪ ಸೇರಿದಂತೆ ಅನುಷ್ಠಾನದ ವಿವರಗಳನ್ನೂ ಒಳಗೊಂಡಿರುವ ‘ವಾಸ್ತವ ಬಜೆಟ್’ ಮಂಡನೆಯಾಗಲಿದೆ’ ಎಂದು ಬಿಬಿಎಂಪಿ ಹಣಕಾಸು ವಿಭಾಗ ವಿಶೇಷ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.