ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ 2018ರಲ್ಲಿ ರೂಪಿಸಿದ್ದ ಜಾಹೀರಾತು ಬೈಲಾವನ್ನು ಬದಿಗಿಟ್ಟು, ಹೊಸತಾಗಿ ‘ಜಾಹೀರಾತು ನಿಯಮಗಳು 2019’ರ ಕರಡು ರೂಪಿಸಿರುವ ಕ್ರಮವನ್ನು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ವಿರೋಧಿಸಿದರು.
2018ರ ಬೈಲಾವನ್ನು ಅನುಮೋದನೆಗಾಗಿ ಕಳುಹಿಸಿ ಮೂರು ತಿಂಗಳ ಬಳಿಕವೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಡೀಮ್ಡ್ ಅನುಮೋದನೆ’ ಎಂದು ಪರಿಗಣಿಸಿ ಆ ಬೈಲಾವನ್ನೇ ಜಾರಿಗೊಳಿಸಬೇಕು ಎಂದು ಸದಸ್ಯರು ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರಾಭಿವೃದ್ಧಿ ಇಲಾಖೆಯ ನಡೆಯನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
ಸಭೆಯ ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ‘ನಗರಾಭಿವೃದ್ಧಿ ಇಲಾಖೆ ಅನುಮತಿ ಆಧರಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ನಿಷೇಧ ಕುರಿತು 2018ರಲ್ಲಿ ಹೊಸ ಜಾಹೀರಾತು ನೀತಿ ಹಾಗೂ ಬೈಲಾ ರಚಿಸಲಾಗಿತ್ತು. ಈಗ ಕೆಎಂಸಿ ಕಾಯ್ದೆಯ ಸೆಕ್ಷನ್ 427ರ ಅಧಿಕಾರ ಬಳಸಿ ಹೊಸತಾಗಿ ಜಾಹೀರಾತು ನಿಯಮಗಳ ಕರಡು ರೂಪಿಸಿದೆ’ ಎಂದರು.
ಈ ಬಗ್ಗೆ ಕ್ರಿಯಾಲೋಪ ಎತ್ತಿದ ಬಿಜೆಪಿ ಸದಸ್ಯ ಮಂಜುನಾಥ ರಾಜು, ‘ಜಾಹೀರಾತು ನೀತಿ ಮತ್ತು ಬೈಲಾ ರೂಪಿಸುವ ಅಧಿಕಾರ ಇರುವುದು ಪಾಲಿಕೆಗೆ ಮಾತ್ರ. ಈ ಬಗ್ಗೆ ಕಾನೂನು ಕೋಶದ ಮುಖ್ಯಸ್ಥರು ಸ್ಪಷ್ಟೀಕರಣ ನೀಡಬೇಕು’ ಎಂದು ಒತ್ತಾಯಿಸಿದರು.
ಕಾನೂನು ಕೋಶದ ಮುಖ್ಯಸ್ಥ ಕೇಶವ ದೇಶಪಾಂಡೆ, ‘ಕೆಎಂಸಿ ಕಾಯ್ದೆಯ ಸೆಕ್ಷನ್ 423ರನ್ವಯ ನೀತಿ ಹಾಗೂ ಬೈಲಾ ರೂಪಿಸುವ ಅಧಿಕಾರ ಪಾಲಿಕೆಗೆ ಇದೆ. ಪಾಲಿಕೆ ಈ ವಿಚಾರದಲ್ಲಿ ವಿಫಲವಾದರೆ ನಿಯಮಗಳನ್ನು ರೂಪಿಸುವ ಅಧಿಕಾರವನ್ನುಸರ್ಕಾರ ಹೊಂದಿದೆ. ಪಾಲಿಕೆ ರಚಿಸಿದ ಬೈಲಾ ಸಮರ್ಥವಾಗಿಲ್ಲ ಎಂದು ಸರ್ಕಾರ ಭಾವಿಸಿದರೆ, ಕಾಯ್ದೆಯ ಸೆಕ್ಷನ್ 427 (1)ರ ಪ್ರಕಾರ ಹೊಸ ನಿಯಮ ರೂಪಿಸುವ ಅಧಿಕಾರ ಹೊಂದಿದೆ’ ಎಂದರು.
‘ಪಾಲಿಕೆ 2018ರ ಜಾಹೀರಾತು ಬೈಲಾದ ಪರಿಷ್ಕೃತ ಕರಡನ್ನು ಸರ್ಕಾರಕ್ಕೆ ಕಳುಹಿಸಿ ಜೂ.13ಕ್ಕೆ ಮೂರು ತಿಂಗಳು ಪೂರ್ಣಗೊಂಡಿದೆ. ಅದನ್ನು ಸರ್ಕಾರ ತಿರಸ್ಕರಿಸಿಲ್ಲವಾದ್ದರಿಂದ, ಅದಕ್ಕೆ ಡೀಮ್ಡ್ ಅನುಮೋದನೆ ಸಿಕ್ಕಿದೆ ಎಂದು ಪರಿಗಣಿಸಬಹುದು’ ಎಂದು ತಿಳಿಸಿದರು.
‘ನಗರಾಭಿವೃದ್ಧಿ ಇಲಾಖೆ ರೂಪಿಸಿದ ಕರಡು ಪಾವಿತ್ರ್ಯತೆಯನ್ನೇ ಹೊಂದಿಲ್ಲ. ಆ ಬಗ್ಗೆ ಚರ್ಚೆ ಬೇಡ. 1 ಕೋಟಿ ಜನರನ್ನು ಪ್ರತಿನಿಧಿಸುವ ಈ ಸಭೆಯು ಸರ್ವಾನುಮತದಿಂದ ಅಂಗೀಕರಿಸಿದ ಬೈಲಾವನ್ನು ತಿರಸ್ಕರಿಸುವುದರಲ್ಲಿ ಅರ್ಥವೇ ಇಲ್ಲ. ಪಾಲಿಕೆಯ ಜಾಹೀರಾತು ನೀತಿಯ ಆಶಯವನ್ನೇ ನಗರಾಭಿವೃದ್ಧಿ ಇಲಾಖೆ ಕಡೆಗಣಿಸಿದೆ. ಸಂಸದೀಯ ಇಲಾಖೆ ಕಾರ್ಯದರ್ಶಿ ಅವರನ್ನೇ ಕೌನ್ಸಿಲ್ ಸಭೆಗೆ ಕರೆಸಿ ವಿವರಣೆ ಕೇಳಬೇಕು’ ಎಂದು ಮಂಜುನಾಥ ರಾಜು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಕೌನ್ಸಿಲ್ ಸಭೆಯ ನಿರ್ಣಯವನ್ನು ಧಿಕ್ಕರಿಸುವ ಮೂಲಕ 198 ಸದಸ್ಯರಿಗೆ ನಗರಾಭಿವೃದ್ಧಿ ಇಲಾಖೆ ಅವಮಾನ ಮಾಡಿದೆ. ಜನರ ಭಾವನೆಗೂ ವಿರುದ್ಧವಾಗಿ ನಡೆದುಕೊಂಡಿದೆ’ ಎಂದು ಆರೋಪಿಸಿದರು.
ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದಾಗ ಮೇಯರ್ ಗಂಗಾಂಬಿಕೆ ಅವರು ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದರು.
ಆಡಳಿತ ಪಕ್ಷದ ಸದಸ್ಯ ಸಭಾತ್ಯಾಗ
ಪಾಲಿಕೆಯ ನಿರ್ಣಯವನ್ನು ಕಡೆಗಣಿಸಿ, ನಗರಾಭಿವೃದ್ಧಿ ಇಲಾಖೆ ಹೊಸ ಜಾಹೀರಾತು ನಿಯಮ ರೂಪಿಸಿದ್ದನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯ ಎಂ.ಕೆ.ಗುಣಶೇಖರ ಸಭಾತ್ಯಾಗ ನಡೆಸಿದರು.
‘ನಾವು ಬೈಲಾ ರೂಪಿಸಿದ್ದರಿಂದ ಕೆಎಂಸಿ ಕಾಯ್ದೆ ಸೆಕ್ಷನ್ 427 ಅನ್ವಯ ಹೊಸ ನಿಯಮ ರಚಿಸುವ ಪ್ರಮೇಯವೇ ಉದ್ಭವಿಸದು. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಗರಾಭಿವೃದ್ಧಿ ಇಲಾಖೆ ನಡೆದುಕೊಂಡಿದೆ’ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ನ ಮಂಜುನಾಥ ರೆಡ್ಡಿ, ‘ಹೋರ್ಡಿಂಗ್ ಅಳವಡಿಕೆಗೆ ಅವಕಾಶ ಬೇಡ ಎಂದು ಪಾಲಿಕೆ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ನಗರದ ಅಂದಗೆಡಿಸುವುದಕ್ಕೆ ಪುನಃ ಅವಕಾಶ ಕಲ್ಪಿಸುವುದು ಬೇಡ’ ಎಂದರು.
ಬೈಲಾ ತಿರಸ್ಕರಿಸಲು ನೋಟಿಸ್ ಕೊಟ್ಟಿಲ್ಲ: ಆಯುಕ್ತ
‘ಪಾಲಿಕೆ ರೂಪಿಸಿದ್ದ ಜಾಹೀರಾತು ಬೈಲಾ ತಿರಸ್ಕರಿಸುವ ಕುರಿತು ನಗರಾಭಿವೃದ್ಧಿ ಇಲಾಖೆ ಯಾವುದೇ ನೋಟಿಸ್ ನೀಡಿಲ್ಲ’ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
‘ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಜಾಹೀರಾತು ನೀತಿಗೆ ನಗರಾಭಿವೃದ್ಧಿ ಇಲಾಖೆ 2018ರ ಸೆ 11ರಂದು ಅನುಮೋದನೆ ಕೊಟ್ಟಿದೆ. ಅದರ ಪ್ರಕಾರ ನಗರದಲ್ಲಿ ಹೋರ್ಡಿಂಗ್ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಆ ನೀತಿಯ ಅನ್ವಯವೇ ಬೈಲಾ ರೂಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಆಯುಕ್ತರಿಗೆ ಶಾಪ: ‘ಬೈಲಾ ಕರಡಿಗೆ ಆಕ್ಷೇಪ ಸಲ್ಲಿಸಲುಒಂದು ತಿಂಗಳು ಕಾಲಾವಕಾಶ ನೀಡಿದ್ದೆವು. 1,318 ಆಕ್ಷೇಪಣೆಗಳು ಬಂದವು. ಈ ಪೈಕಿ 146 ಮಂದಿ ವಿಷಯ ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
‘ನಮ್ಮ ಶಾಪ ನಿಮಗೆ, ನಿಮ್ಮ ಮಕ್ಕಳಿಗೆ ತಟ್ಟಲಿದೆ’ ಎಂದೂ ಕೆಲವರು ಹೇಳಿದ್ದರು. ‘ನನಗೆ ಶಾಪ ತಟ್ಟಿದರೂ ಪರವಾಗಿಲ್ಲ, ನಗರದ ಸೌಂದರ್ಯ ಹಾಳಾಗುವುದು ಬೇಡ’ ಎಂದಿದ್ದೆ. 2019ರ ಜ.1ರಂದು ಬೈಲಾದ ಪರಿಷ್ಕೃತ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದೇವೆ. ಸಂಸದೀಯ ಇಲಾಖೆ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಅದನ್ನೂ ಸಲ್ಲಿಸಿದ್ದೇವೆ’ ಎಂದರು.
‘ನಗರದಲ್ಲಿ ಹೋರ್ಡಿಂಗ್ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುವಂತೆ ಜಾಹೀರಾತು ಬೈಲಾಪರಿಷ್ಕರಿಸಲು ಸೂಚಿಸಿ ಇಲಾಖೆ ಪತ್ರ ಬರೆದಿತ್ತು. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯಿಸಬೇಕು. ಇದಕ್ಕೆ ಸಮಯಾವಕಾಶ ಬೇಕು ಎಂದು ಉತ್ತರಿಸಿದ್ದೆ’ ಎಂದರು.
‘ಮಾಜಿ ಡಿಸಿಎಂ ಪರಮೇಶ್ವರ ಕೈವಾಡ’
‘ಜಾಹೀರಾತು ಕಂಪನಿಗಳಿಗೆ ಪೂರಕವಾಗಿ ಜಾಹೀರಾತು ನಿಯಮ ರೂಪಿಸುವಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಜಿ.ಪರಮೇಶ್ವರ ಅವರ ಕೈವಾಡ ಇದೆ’ ಎಂದು ವಿರೋಧ ಪಕ್ಷದ ಸದಸ್ಯರು ನೇರ ಆರೋಪ ಮಾಡಿದರು.
‘ನೀತಿ ಸಂಹಿತೆ ಜಾರಿಯಲ್ಲಿದ್ದಾಗ ನೀತಿ ನಿರೂಪಣೆಗೆ ಸಂಬಂಧಿಸಿ ಸಚಿವರು ಸಭೆ ನಡೆಸುವಂತಿಲ್ಲ. ಆದರೂ ಸಭೆ ನಡೆಸಿ ಹೊಸ ನಿಯಮ ರೂಪಿಸುವಂತೆ ಸೂಚಿಸಿದ್ದರು. ಚುನಾವಣೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದಲೇ ‘ಜಾಹೀರಾತು ನಿಯಮ 2019’ರ ಕರಡು ರೂಪಿಸಲಾಗಿದೆ’ ಎಂದು ಪದ್ಮನಾಭ ರೆಡ್ಡಿ ದೂರಿದರು.
ಆಯುಕ್ತರಿಗೆ ನೋಟಿಸ್
ಬೆಂಗಳೂರು: ‘ಜಯನಗರ 4ನೇ ಬ್ಲಾಕ್ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ನ ವಾಹನ ನಿಲುಗಡೆ ತಾಣದಲ್ಲಿ ಅಂಗಡಿ ಮಳಿಗೆ ನಿರ್ಮಿಸಲಾಗಿದೆ’ ಎಂದು ಆಕ್ಷೇಪಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಮಹಾಲಕ್ಷ್ಮೀಪುರಂನ ಆರ್.ಆರ್. ಹಿರೇಮಠ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
***
ಜಾಹೀರಾತು ಮುಕ್ತ ಬೆಂಗಳೂರು: ಹಕ್ಕೊತ್ತಾಯ
ಬೆಂಗಳೂರು: ಬಿಬಿಎಂಪಿ ರೂಪಿಸಿದ ‘ಹೊರಾಂಗಣ ಜಾಹೀರಾತು ಬೈಲಾ–2018’ ಕಡೆಗಣಿಸಿ ನಗರಾಭಿವೃದ್ಧಿ ಇಲಾಖೆ ‘ಜಾಹೀರಾತು ನಿಯಮ–2019’ರ ಕರಡು ಸಿದ್ಧಪಡಿಸಿದೆ.
ಇದರ ಕುರಿತು ‘ಪ್ರಜಾವಾಣಿ’ಯ ಜುಲೈ 29ರ ಸಂಚಿಕೆಯಲ್ಲಿ ‘ಹೊರಾಂಗಣ ಜಾಹೀರಾತು: ಏನಿದರ ಹೂರಣ?’ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಗೆ ಓದುಗರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.
ಮಿತಿಯಿರಲಿ
ಯಾವುದೇ ಮಾಹಿತಿ ಸಾರ್ವಜನಿಕರಿಗೆ ತಲುಪುವಲ್ಲಿ ಹೊರಾಂಗಣ ಜಾಹೀರಾತುಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಗದಿತ ಸಮಯದವರೆಗೆ ಜಾಹೀರಾತು ಪ್ರಕಟಿಸುವುದು ಸೂಕ್ತ.
-ಶಶಿಕುಮಾರ್, ಕುಣಿಗಲ್
**
ನಿಷೇಧವೇ ಸೂಕ್ತ
ಹೊರಾಂಗಣ ಜಾಹಿರಾತು ನಿಷೇಧದಿಂದ ಉದ್ಯಾನ ನಗರದ ರಸ್ತೆಗಳ ಅಂದ ಉಳಿದಿದೆ. ಈಗಿರುವ ಜಾಹೀರಾತು ನಿಷೇಧ ಕಾಯ್ದೆಯನ್ನೇ ಕಟ್ಟುನಿಟ್ಟಾಗಿ ಮುಂದುವರಿಸಬೇಕು. ಇದರಿಂದ ಬೆಂಗಳೂರು ಉದ್ಯಾನನಗರವಾಗಿ ಉಳಿಯಲಿದೆ.
-ಗಿ.ಚ.ಸ್ವಾಮಿ, ಕೆಂಗೇರಿ
**
ದಂಡ ವಿಧಿಸಬೇಕು
‘ಬೈಲಾ-2018’ ಕಾಯ್ದೆ ಜಾರಿಗೆ →ತರುವುದೇ ಸೂಕ್ತ. ಹೊರಾಂಗಣ ಜಾಹೀರಾತುಗಳ ಮೇಲೆ ದಂಡ ವಿಧಿಸಬೇಕು. ನಿಯಮ ಪಾಲನೆ ಮಾಡದ ಜಾಹೀರಾತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಆಜು, ಕನಕಪುರ ರಸ್ತೆ
**
ಮುಕ್ತವಾಗಲಿ
ಜಾಹೀರಾತು ಮುಕ್ತ ಬೆಂಗಳೂರನ್ನು ನಿರ್ಮಿಸುವುದು ನಮ್ಮ ಉದ್ದೇಶ. ಹೀಗಾಗಿ ಹೊರಾಂಗಣ →ಜಾಹೀರಾತಿನ ಅವಶ್ಯಕತೆಯಿಲ್ಲ. ಜಾಹೀರಾತು ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.
-ಮುದ್ದುಕೃಷ್ಣ, ಜಯನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.