
ಬೆಂಗಳೂರು: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಮಾಜಿ ಸೈನಿಕನ ಮಗನಾದ ರವಿ, ಎಂಎಸ್ಸಿ ವ್ಯಾಸಂಗ ಮಾಡಿದ್ದು, ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ, ನಷ್ಟವಾಗಿದ್ದರಿಂದ ಏಜೆನ್ಸಿ ಮುಚ್ಚಿ ಮನೆಯಲ್ಲಿದ್ದರು. ಆಗ ಹಣ ದರೋಡೆಗೆ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ.
ನಗರದಲ್ಲಿ ವಾಸವಿರುವ ರವಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ತನ್ನ ಪತಿ ದರೋಡೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ರವಿಯ ಸಹೋದರ ಹಾಗೂ ಅವರ ತಂದೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಕಾನ್ಸ್ಟೆಬಲ್ ಅಣ್ಣಪ್ಪ ನಾಯ್ಕ್ ಬಾರ್ನಲ್ಲಿ ಪರಿಚಿತರಾಗಿದ್ದರು. ರವಿ, ನವೀನ್ ಮತ್ತು ನೆಲ್ಸನ್ ಸ್ನೇಹಿತರು ಹಾಗೂ ಚಿತ್ತೂರಿನವರು. ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿಗೆ ಗೋಪಾಲ್, ಅಣ್ಣಪ್ಪ ಅವರ ಪರಿಚಯವಿತ್ತು. ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಕಾರಣ, ದೊಡ್ಡ ಮೊತ್ತದ ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಪಾತ್ರವೇನು?:
ರವಿ ತನ್ನ ಸ್ನೇಹಿತರು ಹಾಗೂ ಇತರೆ ಆರೋಪಿಗಳ ಜತೆ ಚರ್ಚಿಸಿ, ಯೋಜನೆ ರೂಪಿಸುತ್ತಾರೆ. ಎಲ್ಲೆಲ್ಲಿ ಇಲಾಖೆಯ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ? ಯಾವ ಹೆಸರು ಹೇಳಿದರೆ ಏಜೆನ್ಸಿ ವಾಹನದ ಸಿಬ್ಬಂದಿ ಆತಂಕಕ್ಕೆ ಒಳಗಾಗುತ್ತಾರೆ? ಕಾರಿನ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಂಡು ಹೇಗೆ ಪರಾರಿಯಾಗಬೇಕು? ಎಂಬ ಯೋಜನೆಯನ್ನು ಅಣ್ಣಪ್ಪ ನಾಯ್ಕ್ ರೂಪಿಸಿದ್ದ ಎಂದು ಹೇಳಲಾಗಿದೆ.
ಏಜೆನ್ಸಿ ವಾಹನದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು, ಸಿಬ್ಬಂದಿ ಸಂಖ್ಯೆ ಹಾಗೂ ತುರ್ತು ಬಟನ್ ಒತ್ತುವ ಮೊದಲೇ ಸಿಬ್ಬಂದಿಯನ್ನು ಕೆಳಗಿಳಿಸಬೇಕು ಎಂಬುದರ ಬಗ್ಗೆ ಕ್ಸೇವಿಯರ್ ಮಾಹಿತಿ ನೀಡಿದ್ದರು. ಯಾವ ದಿನ, ಯಾವ ಮಾರ್ಗದಲ್ಲಿ ಹೆಚ್ಚು ಹಣ ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ ಎಂಬುದರ ಕುರಿತು ಗೋಪಾಲ್ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.
ಪರಿಚಿತ ಟ್ರಾವೆಲ್ ಏಜೆನ್ಸಿಗಳಿಂದ ಎರಡು ವಾಹನಗಳನ್ನು ಬಾಡಿಗೆಗೆ ಪಡೆದು ತಂದಿದ್ದ ರವಿ, ಅವುಗಳನ್ನು ದರೋಡೆಗೆ ಬಳಸಿದ್ದರು. ಈ ವಾಹನಗಳಿಗೆ ನವೀನ್ ಮತ್ತು ನೆಲ್ಸನ್ ಚಾಲಕರಾಗಿದ್ದರು. ಎಲ್ಲಿ ಸಂಚಾರ ದಟ್ಟಣೆ ಇರುವುದಿಲ್ಲ, ಎಷ್ಟು ಚೆಕ್ ಪೋಸ್ಟ್ಗಳು ಇವೆ. ಎಷ್ಟು ಹೊತ್ತಿಗೆ ನಿಗದಿತ ಸ್ಥಳ ತಲುಪುತ್ತೇವೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ರವಿ, ಕೃತ್ಯ ನಡೆದ ಒಂದೂವರೆ ತಾಸಿನಲ್ಲಿ ಕೆ.ಆರ್.ಪುರ, ಹೊಸಕೋಟೆ, ಕೋಲಾರ ಮಾರ್ಗವಾಗಿ ಹಣದೊಂದಿಗೆ ವಾಹನ ಆಂಧ್ರಪ್ರದೇಶದ ಗಡಿ ತಲುಪಿತ್ತು. ಘಟನೆ ನಡೆದ ಒಂದೂವರೆ ತಾಸಿನ ಬಳಿಕ ಪೊಲೀಸರಿಗೆ ವಿಷಯ ಗೊತ್ತಾಗಿತ್ತು.
ಅಣ್ಣಪ್ಪ ನಾಯ್ಕ್ ಹಾಗೂ ಕ್ಸೇವಿಯರ್ ನಡುವಿನ ಮೊಬೈಲ್ ಸಂಭಾಷಣೆ ಮಾಹಿತಿ ಆಧಾರದ ಮೇಲೆ ಬಂಧಿಸಲಾಗಿದೆ. ದರೋಡೆ ನಡೆಯುವುದಕ್ಕೆ ವಾರದ ಹಿಂದೆ ಇಬ್ಬರೂ ಮೊಬೈಲ್ನಲ್ಲಿ ಮಾತನಾಡಿರುವುದು ಗೊತ್ತಾಗಿದೆ. ಶಿವಮೊಗ್ಗ ಜಿಲ್ಲೆಯ ಅಪ್ಪಣ್ಣ ಅವರು 2018ರಲ್ಲಿ ಇಲಾಖೆಗೆ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.