
ಬೆಂಗಳೂರು: ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಸ್ನೇಹಿತನನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತ್ಯಾಗರಾಜನಗರ ನಿವಾಸಿ ಸುರೇಶ್ (45) ಕೊಲೆಯಾದವರು. ವೇಲು, ಸ್ಟಿಫನ್ ರಾಜ್ ಹಾಗೂ ಪ್ರದೀಪ್ ಬಂಧಿತರು.
ಸುರೇಶ್ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ವೇಲು ಹೋಟೆಲ್ ನಡೆಸುತ್ತಿದ್ದರು. ಸ್ಟಿಫನ್ ರಾಜ್ ಹಾಗೂ ಪ್ರದೀಪ್ ಅವರು ಅದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ವೇಲು ಆಟೊ ರಿಕ್ಷಾವನ್ನು ಓಡಿಸುತ್ತಿದ್ದರು. ಈ ನಾಲ್ವರೂ ಸ್ನೇಹಿತರಾಗಿದ್ದರು ಎಂದು ಮೂಲಗಳು ಹೇಳಿವೆ.
‘ಗುರುವಾರ ರಾತ್ರಿ ನಾಲ್ವರೂ ಬಾರ್ನಲ್ಲಿ ಪಾರ್ಟಿ ನಡೆಸಿದ್ದರು. ನಂತರ, ಆಟೊದಲ್ಲಿ ನಗರದ ವಿವಿಧೆಡೆ ಸುತ್ತಾಡಿದ್ದರು. ಮದ್ಯದ ಅಮಲಿನಲ್ಲಿ ಶುಕ್ರವಾರ ಮುಂಜಾನೆ ಸುರೇಶ್ ಹಾಗೂ ವೇಲು ಅವರ ನಡುವೆ ಗಲಾಟೆ ನಡೆದಿತ್ತು. ಮಾತಿನ ಚಕಮಕಿಯು ವಿಕೋಪಕ್ಕೆ ಹೋಗಿ, ಬಿಯರ್ ಬಾಟಲಿಯಿಂದ ವೇಲು ಹಾಗೂ ಆತನ ಸಹಚರರು ಸುರೇಶ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದರು. ಹಲ್ಲೆಗೊಳಗಾದ ಸುರೇಶ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಹಳೆ ದ್ವೇಷದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.