ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ‘ಬೆಂಗಳೂರು ಕಿರುನಾಟಕೋತ್ಸವ’ 5ನೇ ಆವೃತ್ತಿ ಹಮ್ಮಿಕೊಂಡಿದ್ದು, ತಂಡಗಳ ನೋಂದಣಿಗೆ ಜೂನ್ 27 ಕೊನೆಯ ದಿನವಾಗಿದೆ.
ಈ ನಾಟಕೋತ್ಸವವು ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಲಿದೆ. ‘ಸಮಗ್ರತೆ’ ನಾಟಕೋತ್ಸವದ ವಿಷಯವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಈ ವಿಷಯದ ಮೇಲೆ ನಾಟಕಗಳನ್ನು ಪ್ರದರ್ಶಿಸಬೇಕಿದೆ. ಪ್ರಾಥಮಿಕ ಸ್ಪರ್ಧೆ ಜೂನ್ 29 ಹಾಗೂ ಅಂತಿಮ ಹಂತದ ಸ್ಪರ್ಧೆ ಜುಲೈ 12ರಂದು ನಡೆಯಲಿದೆ.
ಅತ್ಯುತ್ತಮ ನಾಟಕ ಪ್ರಶಸ್ತಿ ತೀರ್ಪುಗಾರರ ಹಾಗೂ ಪ್ರೇಕ್ಷಕರ ಆಯ್ಕೆ ಪ್ರತ್ಯೇಕ ಇರಲಿದ್ದು, ಫಲಕ ಹಾಗೂ ತಲಾ ₹10 ಸಾವಿರ ನಗದು ಒಳಗೊಂಡಿದೆ. ‘ಆರ್.ನಾಗೇಶ್ ಅತ್ಯುತ್ತಮ ನಿರ್ದೇಶನ’, ‘ಸಂಚಾರಿ ವಿಜಯ್ ಅತ್ಯುತ್ತಮ ನಟ’, ‘ಉಮಾಶ್ರೀ ಅತ್ಯುತ್ತಮ ನಟಿ’, ‘ಅತ್ಯುತ್ತಮ ಕಥೆ’, ‘ಅತ್ಯುತ್ತಮ ನಾಟಕ ವಿನ್ಯಾಸ’, ‘ಅತ್ಯುತ್ತಮ ಭಿತ್ತಿಚಿತ್ರ ವಿನ್ಯಾಸ’ ಹಾಗೂ ‘ಅತ್ಯುತ್ತಮ ನಿರ್ವಹಣೆ’ ಪ್ರಶಸ್ತಿಗಳನ್ನು ಈ ನಾಟಕೋತ್ಸವ ಒಳಗೊಂಡಿದೆ. ಈ ಪ್ರಶಸ್ತಿಗಳು ತಲಾ ₹2,500 ನಗದು ಹೊಂದಿವೆ.
ಭಾಗವಹಿಸುವ ಪ್ರತಿ ತಂಡಕ್ಕೂ ರಂಗಸಜ್ಜಿಕೆಯ ಸಮಯ ಸೇರಿ 15 ನಿಮಿಷ ನೀಡಲಾಗುತ್ತದೆ. ನಾಟಕ ಪ್ರದರ್ಶನ ಕನಿಷ್ಠ 10 ನಿಮಿಷವಿರಬೇಕು. ಭಾಗವಹಿಸುವ ಪ್ರತಿ ತಂಡದಲ್ಲೂ ರಂಗದ ಮೇಲೆ ಕನಿಷ್ಠ ಇಬ್ಬರು ಹಾಗೂ ಗರಿಷ್ಠ 8 ಕಲಾವಿದರು ಇರಬೇಕು. ರಂಗತಂಡಗಳು ಮತ್ತು ರಂಗಕರ್ಮಿಗಳು ನೋಂದಾಯಿಸಿಕೊಳ್ಳಬಹುದು. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಂದ ಸ್ಪರ್ಧಿಸುವ ತಂಡಗಳಿಗೆ ಪ್ರಾಥಮಿಕ ಹಂತದ ಸ್ಪರ್ಧೆ ಆನ್ಲೈನ್ನಲ್ಲಿ ನಡೆಯಲಿದೆ ಎಂದು ಕಿರುನಾಟಕೋತ್ಸವದ ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ ತಿಳಿಸಿದ್ದಾರೆ.
ಪ್ರತಿ ತಂಡ ₹1 ಸಾವಿರ ಪ್ರವೇಶ ದರವನ್ನು ಪಾವತಿಸಬೇಕು. ಅಂತಿಮ ಸುತ್ತಿಗೆ ಆಯ್ಕೆಯಾಗದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುತ್ತದೆ. ಅಂತಿಮ ಹಂತದ ಸ್ಪರ್ಧೆಗೆ 6 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಹಾಗೂ ಅಂತಿಮ ಹಂತದ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ವಿವರಕ್ಕೆ: 9902590303 ಅಥವಾ 9686869676
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.