
ಉಮಾಶ್ರೀ, ಬರಗೂರು ರಾಮಚಂದ್ರಪ್ಪ ಮತ್ತು ಪ್ರಕಾಶ್ ರಾಜ್ ಅವರು ನಗಾರಿ ಬಾರಿಸುವ ಮೂಲಕ ಭಾರತ ರಂಗ ಮಹೋತ್ಸವ ಉದ್ಘಾಟಿಸಿದರು. ಎಲ್.ಎನ್. ಮುಕುಂದರಾಜ್, ಪುರುಷೋತ್ತಮ ಬಿಳಿಮಲೆ, ಕೆ.ವಿ. ನಾಗರಾಜಮೂರ್ತಿ, ಗೊ.ರು. ಚನ್ನಬಸಪ್ಪ, ಕೆ.ಎಂ. ಗಾಯಿತ್ರಿ ಮತ್ತು ಕೆ.ಟಿ ಶಾಂತಲಾ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರಗಳು:ರಂಜು ಪಿ.
ಬೆಂಗಳೂರು: ಒಂದೆಡೆ ರಂಗಭೂಮಿಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾತು ಮಂಥನ ನಡೆದರೆ, ಇನ್ನೊಂದೆಡೆ ವಿವಿಧ ರಂಗ ತಂಡಗಳಿಂದ ರಂಗ ಗೀತೆಗಳ ಗಾಯನ. ಮತ್ತೊಂದೆಡೆ ನಾಟಕಗಳ ಪ್ರದರ್ಶನ.
ಹೀಗೆ ರಂಗ ಲೋಕ ಒಂದೇ ಸೂರಿನಡಿ ಅನಾವರಣಗೊಂಡಿದ್ದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಗೆ ಭಾನುವಾರ ಚಾಲನೆ ದೊರೆಯಿತು.
ಐದು ವೇದಿಕೆಗಳಲ್ಲಿ ನಾಟಕಗಳ ಪ್ರದರ್ಶನ ಹಾಗೂ ರಂಗ ಗೀತೆಗಳ ಗಾಯನದ ಜತೆಗೆ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆದವು. ವಿವಿಧ ರಂಗ ತಂಡಗಳಿಂದ ರಂಗ ದಿಗ್ಗಜರ ಛಾಯಾಚಿತ್ರ, ನಾಟಕಗಳ ದೃಶ್ಯಾವಳಿಯ ಪ್ರದರ್ಶನ ಗಮನ ಸೆಳೆಯಿತು. ಪುಸ್ತಕ ಮಳಿಗೆ, ಆಹಾರ ಮಳಿಗೆಗಳೂ ಪರಿಷೆಯ ಭಾಗವಾಗಿದ್ದವು.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭಾರತ ರಂಗ ಮಹೋತ್ಸವವನ್ನು ಉದ್ಘಾಟಿಸಿದರು. ನಟ ಪ್ರಕಾಶ್ ರಾಜ್ ಅವರು ರಂಗ ಪರಿಷೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ನಟಿ ಉಮಾಶ್ರೀ ಅವರಿಗೆ ಉತ್ಸವದ ಗೌರವ ಪ್ರದಾನ ಮಾಡಲಾಯಿತು. ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಕೆ.ಟಿ. ಶಾಂತಲಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ರಂಗಪರಿಷೆ ನಿರ್ದೇಶಕ ಬಿ. ಸುರೇಶ ಮೊದಲಾದವರು ಪಾಲ್ಗೊಂಡಿದ್ದರು.
40 ವರ್ಷ ಪೂರೈಸಿರುವ ‘ಅಂತರಂಗ’ ಹವ್ಯಾಸಿ ನಾಟಕ ತಂಡ ಮತ್ತು ‘ಕದಂಬ ರಂಗ ವೇದಿಕೆ’ ರಂಗ ತಂಡಕ್ಕೆ ಇದೇ ವೇಳೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ರಂಗ ಪರಿಷೆಗೆ ಚಾಲನೆ ನೀಡಲಾಯಿತು. ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಉತ್ಸವ ಗೌರವ ಪ್ರದಾನ ಮಾಡಲಾಯಿತು. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ರಂಗ ಪರಿಷೆ ಸಂಯೋಜಕ ಶಶಿಧರ ಭಾರಿಘಾಟ್ ಮೊದಲಾದವರು ಉಪಸ್ಥಿತರಿದ್ದರು.
‘ರಂಗ ಪರಿಷೆಗೆ ಅಗತ್ಯ ನೆರವು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಈ ರಂಗ ಪರಿಷೆ ಮಾಡುತ್ತಿದ್ದೇವೆ. ವಿವಿಧ ರಂಗ ತಂಡಗಳು ಬೆನ್ನೆಲುಬಾಗಿ ನಿಂತ ಪರಿಣಾಮ ಈ ಪರಿಷೆ ಸಾಧ್ಯವಾಗುತ್ತಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಹೇಳಿದರು.
ಪ್ರವರ ಥಿಯೇಟರ್, ವಿಜಯನಗರ ಬಿಂಬ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತಂಡಗಳು ರಂಗಗೀತೆಗಳನ್ನು ಪ್ರಸ್ತುತಪಡಿಸಿದವು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಸ್ತುತಿಯಲ್ಲಿ ನಾಟ್ಯ ಭೈರವಿ ಕಲಾ ಕುಟೀರ ತಂಡವು ಭರತನಾಟ್ಯ ಪ್ರದರ್ಶಿಸಿತು. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ತಂಡದಿಂದ ‘ಬಾಬೂಜಿ’ ನಾಟಕ, ನಿರ್ದಿಗಂತ ತಂಡದಿಂದ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕಗಳು ಪ್ರದರ್ಶನಗೊಂಡವು.
ರಂಗ ಕಲೆಯು ಭೂಮಿ ಸತ್ವದ ಹಾಗೂ ಭೂಮಿ ಸತ್ಯದ ಕಲೆಯಾಗಿದೆ. ಕನ್ನಡ ರಂಗಭೂಮಿ ಪ್ರಯೋಗಶೀಲತೆಯಿಂದ ಕೂಡಿದೆ. ಎಲ್ಲ ಮಾದರಿ ಅಳವಡಿಸಿಕೊಂಡು ಬೆಳೆದಿದೆ.– ಬರಗೂರು ರಾಮಚಂದ್ರಪ್ಪ, ಸಾಹಿತಿ
ರಂಗಭೂಮಿಯ ಅಲ್ಲಲ್ಲಿ ಕಂಡ ಹಾಗೆ ಇಲ್ಲಿನ ಸತ್ವ-ತತ್ವವನ್ನು ಅಲುಗಾಡಿಸುವ ಶಕ್ತಿ ಒಳಹೊಕ್ಕಿವೆ. ಇಂತಹ ಆತಂಕಗಳ ನಡುವೆ ರಂಗಭೂಮಿಯನ್ನು ಕಟ್ಟಬೇಕಾಗಿದೆ.– ಉಮಾಶ್ರೀ, ನಟಿ
ರಂಗ ಕಲೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಅವಲಂಬನೆಯಾಗದೆ ಜನರೇ ಬೆಳೆಸುವಂತಾಗಬೇಕು. ಇದು ರಂಗ ಪರಿಷೆಯಿಂದ ಸಾಧ್ಯವಾಗಲಿದೆ.– ಪ್ರಕಾಶ್ ರಾಜ್, ನಟ
ದಕ್ಷ ತರಂಗ ತಂಡದ ವಿದ್ಯಾರ್ಥಿಗಳು ಗಮನ ಸೆಳೆದರು
‘ರಂಗ ಶಿಕ್ಷಕರನ್ನು ನೇಮಿಸಿ’
‘ಕನ್ನಡ ಭಾಷೆ ಉಳಿಸುವಲ್ಲಿ ಕನ್ನಡ ರಂಗಭೂಮಿ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ ರಾಜ್ಯ ಸರ್ಕಾರವು ಆಯ್ದ ಶಾಲೆಗಳಲ್ಲಾದರೂ ರಂಗ ಶಿಕ್ಷಕರನ್ನು ನೇಮಕ ಮಾಡಬೇಕು. ನಾವೆಲ್ಲ ಒಂದು ಎಂಬ ಭಾವ ಮೂಡಲು ನಾಟಕ ಸಹಕಾರಿ. ರಂಗ ಶಿಕ್ಷಕರ ನೇಮಕದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ರಂಗಭೂಮಿಗೆ ಹೆಚ್ಚು ಅನುದಾನ ನೀಡಿದರೆ ರಂಗ ಸಂಸ್ಕೃತಿ ಬೆಳೆಯಲು ಸಾಧ್ಯ. ಆದ್ದರಿಂದ ಸರ್ಕಾರವು ರಂಗಾಯಣಗಳು ಹಾಗೂ ರಂಗ ಚಟುವಟಿಕೆ ಕೈಗೊಂಡಿರುವ ಸಂಘ–ಸಂಸ್ಥೆಗಳಿಗೆ ಅಗತ್ಯ ಅನುದಾನ ಒದಗಿಸಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನಾಟಕ ಸಹಕಾರಿ. ರಂಗ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದ್ಯತೆ ನೀಡಬೇಕು. ಕನಿಷ್ಠ ನೂರು ಶಿಕ್ಷಕರನ್ನಾದರೂ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.