ಬೆಂಗಳೂರು: ಶಿಷ್ಟಾಚಾರ ಪಾಲನೆಯ ವಿಷಯವಾಗಿ ಹೂಡಿಕೆದಾರರ ಜಾಗತಿಕ ಸಮಾವೇಶದಲ್ಲೂ ಕಾಂಗ್ರೆಸ್ ಕೀಳು ರಾಜಕೀಯ ಪ್ರದರ್ಶಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಎಲ್ಲಾ ದಿನಪತ್ರಿಕೆಗಳಲ್ಲೂ ಫುಲ್ ಪೇಜ್ ಜಾಹೀರಾತು ನೀಡಿದೆ. ಆದರೆ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ನೆರವೇರಿಸಲಿರುವ ಕೇಂದ್ರ ರಕ್ಷಣಾ ಸಚಿವರಾಜನಾಥ್ ಸಿಂಗ್ ಅವರ ಫೋಟೋ ಜಾಹೀರಾತಿನಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಫೋಟೋ ಯಾಕೆ ಹಾಕಿಲ್ಲ? ಕೇವಲ ಸಿಎಂ, ಡಿಸಿಎಂ ಹಾಗು ಕೈಗಾರಿಕಾ ಸಚಿವರ ಫೋಟೋ ಹಾಕಲು ಹೂಡಿಕೆದಾರರ ಸಮಾವೇಶ ರಾಜಕೀಯ ಕಾಂಗ್ರೆಸ್ ಪಕ್ಷದ ರಾಜಕೀಯ ಸಮಾವೇಶವಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಅಂತ ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಪ್ರಥಮ ಪ್ರಜೆಯಾಗಿರುವ ರಾಜ್ಯಪಾಲರ ಫೋಟೋ ಹಾಕುವ ಕನಿಷ್ಠ ಶಿಷ್ಟಾಚಾರವನ್ನೂ ಪಾಲನೆ ಮಾಡುವ ಸೌಜನ್ಯವಿಲ್ಲ ಎಂದಿದ್ದಾರೆ.
ಈ ಶಿಷ್ಟಾಚಾರದ ಕೀಳು ರಾಜಕೀಯ ಒಂದು ಕಡೆಯಾದರೆ ಮತ್ತೊಂದು ಕಡೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶಾತಿ ಶುಲ್ಕ ವಿಧಿಸುವ ಮೂಲಕ ರಾಜ್ಯ ಸರ್ಕಾರ ಎಷ್ಟು ಪಾಪರ್ ಆಗಿದೆ ಎಂದು ಮತ್ತೊಮ್ಮೆ ಪ್ರದರ್ಶನ ಮಾಡಿದೆ. ನಮ್ಮ ರಾಜ್ಯದ ಯುವ ಜನಾಂಗಕ್ಕೆ ಈ ಹೂಡಿಕೆದಾರರ ಸಮಾವೇಶದಲ್ಲಿ ಪ್ರವೇಶ ಇಲ್ಲದ ಮೇಲೆ ಈ ಸಮಾವೇಶ ಮಾಡುತ್ತಿರುವುದಾದರೂ ಯಾರಿಗೋಸ್ಕರ? ಮೂರು ದಿನ ಫೋಟೋ ಶೂಟ್ ಮಾಡಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯೋದಕ್ಕಾ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.