ರಕ್ತಹೀನತೆಯಿಂದ ಬಳಲುತ್ತಿದ್ದ ನೈಜೀರಿಯಾದ ಸಹೋದರರಿಗೆ ಮರುಹುಟ್ಟು ಸಿಕ್ಕಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಮಕ್ಕಳಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆ ಕಸಿ ಮಾಡಲಾಗಿದೆ. ಸೊನಾಯೆ ಮತ್ತು ಜ್ಯೂಡ್ನ ಪೋಷಕರು ಈಗ ನಿರಾಳರಾಗಿದ್ದಾರೆ.
ಸಿಕಲ್ ಸೆಲ್ ಡಿಸೀಸ್ನಿಂದ ಅವರು ಬಳಲುತ್ತಿದ್ದರು. ಇದು ರಕ್ತಹೀನತೆಯಿಂದ ಬರುವ ವಂಶಪಾರಂಪರ್ಯ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಕೆಂಪುರಕ್ತ ಕಣಗಳು ವಿರೂಪಗೊಳ್ಳುತ್ತವೆ. ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಪಾರ್ಶ್ವವಾಯು, ಅಂಧತ್ವ ಉಂಟಾಗುವ ಸಾಧ್ಯತೆ ಇರುತ್ತದೆ. ಅಂಗಾಂಗ ಹಾನಿ ಕೂಡ ಆಗಬಹುದು.
ಏಳು ವರ್ಷದ ಸೊನಾಯೆ ಮತ್ತು ಮೂರು ವರ್ಷದ ಜ್ಯೂಡ್ ಇಬ್ಬರೂ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಸೊನಾಯೆ ಮೊದಲೇ ಪಾರ್ಶ್ವವಾಯುವಿಗೆ ತುತ್ತಾಗಿದ್ದ. ದೇಹದ ಒಂದು ಭಾಗ ಶಕ್ತಿಹೀನವಾಗಿತ್ತು. ಈ ಸಂದರ್ಭದಲ್ಲಿ ಅವರ ಪೋಷಕರು, 1000ಕ್ಕೂ ಹೆಚ್ಚು ಅಸ್ಥಿಮಜ್ಜೆ ಕಸಿ ಮಾಡಿರುವ ನಾರಾಯಣ ಹೆಲ್ತ್ ಸಿಟಿಗೆ ಮಕ್ಕಳನ್ನು ಸೇರಿಸಿದರು. ಮಜುಂದಾರ್ ಕ್ಯಾನ್ಸರ್ ಕೇಂದ್ರದಲ್ಲಿ ಅವರಿಗೆ ಆರೈಕೆ ಮಾಡಲಾಯಿತು. ಈಗ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಸುನಿಲ್ ಭಟ್ ನೇತೃತ್ವದ ತಂಡ ಯಶಸ್ವಿಯಾಗಿ ಕಸಿ ಮಾಡಿದೆ. ನೈಜೀರಿಯಾದಲ್ಲಿ ಅವರ ಸಂಬಂಧಿಕರು ಹಾಗೂ ಕುಟುಂಬದವರು ಇದ್ದರು. ಅಲ್ಲಿ ಅಸ್ಥಿಮಜ್ಜೆ ಕಸಿಗಾಗಿ ನೋಂದಣಿ ಮಾಡಿಕೊಳ್ಳುವ ಕುರಿತು ಅರಿವು ಇಲ್ಲದ ಕಾರಣ ದಾನಿಗಳು ಯಾರೂ ಸಿಗಲಿಲ್ಲ. ತಂದೆಯ ಎಚ್ಎಲ್ಎ ಅರ್ಧದಷ್ಟು ಮಾತ್ರ ಹೊಂದಾಣಿಕೆಯಾಗಿತ್ತು. ಹೀಗಿದ್ದರೂ ಕಸಿ ಮಾಡಲು ವೈದ್ಯರ ತಂಡ ನಿರ್ಧರಿಸಿತು. ಅನೇಕ ಸವಾಲುಗಳನ್ನು ಎದುರಿಸಿದ ಬಳಿಕ ಮಕ್ಕಳು ಈಗ ಆರೋಗ್ಯವಾಗಿದ್ದಾರೆ.
‘ತಂದೆಯ ಕೋಶಗಳು ಸ್ವಲ್ಪ ಹೊಂದಾಣಿಕೆಯಾಗಿದ್ದರೂ ಹೆಪ್ಲೊ–ಸಾಮ್ಯತೆಯ ಕಸಿ ವಿಧಾನವನ್ನು ಬಳಸಿದ್ದರಿಂದ ಯಶಸ್ವಿಯಾದೆವು’ ಎಂದು ಸುನಿಲ್ ಭಟ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.