ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ಹರಡುವಿಕೆ ತಡೆಗಾಗಿ ಇಂದು ರಾತ್ರಿಯಿಂದ ಜ. 1ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ರಾತ್ರಿ ವೇಳೆ ಕಂಪನಿಗಳಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿ ಇಟ್ಟುಕೊಂಡಿರಬೇಕು' ಎಂದಿದ್ದಾರೆ.
‘ಗುರುವಾರ ರಾತ್ರಿ 11ರಿಂದ ಬೆಳಿಗ್ಗೆ 5ವರೆಗೆ ಕರ್ಫ್ಯೂ ಇರಲಿದೆ. ಬೆಂಗಳೂರಿನ ಜನ ಸಹಕರಿಸಬೇಕು. ಇಮಾನ ನಿಲ್ದಾಣ, ರೈಲ್ವೆ ನಿಲ್ದಾಣದ ಬಳಿ ಆಟೋ-ಟ್ಯಾಕ್ಸಿ ಲಭ್ಯವಿರಲಿವೆ. ಭದ್ರತಾ ಸಿಬ್ಬಂದಿಗೆ ಪ್ರಯಾಣಿಕರು ಟಿಕೆಟ್ ತೋರಿಸುವುದು ಕಡ್ಡಾಯ' ಎಂದರು.
‘ಅನಾವಶ್ಯಕವಾಗಿ ಓಡಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದರು.
‘ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನರು ಸೇರುವಂತಿಲ್ಲ. ರಾತ್ರಿ 11ರ ಬಳಿಕ ವಿನಾಕಾರಣ ರಸ್ತೆಗಳಿಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ ತಪ್ಪಿತಸ್ಥರನ್ನು ವಶಕ್ಕೆ ಪಡೆಯಲಾಗುವುದು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.