ADVERTISEMENT

ರೈತ ಸಂತೆ: ಗಮನ ಸೆಳೆದ ಮಾವು, ಹಲಸಿನ ಕೇಕ್‌ಗಳು!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ರೈತ ಸಂತೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 0:05 IST
Last Updated 29 ಜೂನ್ 2025, 0:05 IST
ಮಕ್ಕಳು ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿದರು 
ಮಕ್ಕಳು ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿದರು    

ಬೆಂಗಳೂರು: ಮಾವು ಮತ್ತು ಹಲಸಿನಿಂದ ತಯಾರಿಸಲಾದ ಆಲಂಕಾರಿಕ ಕೇಕ್‌ಗಳು, ತೆಂಗಿನ ಗರಿಯಿಂದ ತಯಾರಿಸಿದ ಟೋಪಿ, ರಾಗಿಯಿಂದ ಪಾಪ್‌ಕಾರ್ನ್‌ ತಯಾರಿಸುವ ಯಂತ್ರ, ಆಲಂಕಾರಿಕ ಮೀನುಗಳು ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳು ಸಾರ್ವಜನಿಕರನ್ನು ಸೆಳೆದವು. 

ಇದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ರೈತ ಸಂತೆಯಲ್ಲಿ ಕಂಡು ಬಂದ ದೃಶ್ಯಗಳು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯವರ್ಧನ ಸಂಸ್ಥೆಯ ಅಡಿಯಲ್ಲಿ 36 ವಿದ್ಯಾರ್ಥಿಗಳು 120ಕ್ಕೂ ಹೆಚ್ಚು ವಿವಿಧ ನವೀನ ಉತ್ಪನ್ನಗಳನ್ನು ತಯಾರಿಸಿ, ರೈತ ಸಂತೆಯಲ್ಲಿ ಮಾರಾಟ ಮಾಡಿದರು. ಇವುಗಳಲ್ಲಿ ಪ್ರಮುಖವಾಗಿ ಓರಿಯೋ ಬ್ರೌನಿ, ಕ್ಯಾರೆಟ್‌ ಕೇಕ್‌, ಬಾಳೆ ಹಣ್ಣಿನ ಕೇಕ್‌, ವೈವಿದ್ಯಮಯ ಬಿಸ್ಕತ್ತು, ಮಿಲೇಟ್‌ ಕೇಕ್‌, ಗ್ಲೂಟುನ್‌ ಫ್ರೀ ಬಿಸ್ಕತ್ತು, ಓಟ್ಸ್‌ ಬಿಸ್ಕತ್ತು, ಮೊಟ್ಟೆರಹಿತ ವಿವಿಧ ಕೇಕ್‌ಗಳು, ತೆಂಗಿನ ಬನ್‌ಗಳು ಇದ್ದವು. ಸಾರ್ವಜನಿಕರು ಖರೀದಿಸುತ್ತಿದ್ದರು. 

ADVERTISEMENT

ಕೊಯ್ಲೋತ್ತರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಯೋಜನೆಯ ಅಡಿಯಲ್ಲಿ ಸಿರಿಧಾನ್ಯಗಳಿಂದ ಹರಳು ಮಾಡುವ ಯಂತ್ರ, ಮುಸುಕಿನ ಜೋಳದ ತೆನೆಗಳಿಂದ ಕಾಳು ಬಿಡಿಸುವ ಯಂತ್ರ ಮತ್ತು ಹರಳು ಹೊಟ್ಟು ತೆಗೆಯುವ ಯಂತ್ರಗಳು ಗ್ರಾಹಕರ ಆಕರ್ಷಣೆಯಾಗಿದ್ದವು. 

ಆಲಂಕಾರಿಕ ಮೀನುಗಳಾದ ಗಪ್ಪಿ, ಗೋಲ್ಡ್‌ ಫಿಶ್‌, ಕಪ್ಪು ಎಂಜೆಲ್‌, ಪ್ಲಾಟೆ, ಮೋಲಿ, ಕೊಟ್ಟಿಬಾಲ ಮತ್ತು ಅದರ ಆಹಾರ ಪದಾರ್ಥಗಳಿರುವ ಮಳಿಗೆಗಳು ಪ್ರದರ್ಶನದ ಆಕರ್ಷಣೀಯ ಕೇಂದ್ರವಾಗಿತ್ತು. ಮಹಿಳಾ ಸ್ವಸಹಾಯ ಸಂಘದಿಂದ ವಿವಿಧ ಮೌಲ್ಯವರ್ಧಿತ ಪದಾರ್ಥಗಳಾದ ನುಗ್ಗೆ ಸೊಪ್ಪಿನ ಚಟ್ನಿಪುಡಿ, ಹಲಸು–ಮಾವು ಮತ್ತು ಬೆಟ್ಟದ ನೆಲ್ಲಿ ಜಾಮ್, ಹಲಸಿನ ಉಪ್ಪಿನಕಾಯಿ, ಬೆಲ್ಲಕಾಯಿ ತೊಕ್ಕು, ಬಾಳೆ ಹೂವಿನ ತೊಕ್ಕು ಸೇರಿದಂತೆ ಹಲವಾರು ಪದಾರ್ಥಗಳು ಪ್ರದರ್ಶನ ಮತ್ತು ಮಾರಾಟ ನಡೆಯಿತು.  

ನಗರ ಪ್ರದೇಶದ ಮಕ್ಕಳು ಎತ್ತಿನ ಬಂಡಿಯ ಸವಾರಿ ಮಾಡಿದರು. ಸಂತೆಯ ಅಂಗಳದಲ್ಲಿ ವಿವಿಧ ಜಾನುವಾರುಗಳು ನೋಡುಗರನ್ನು ಗಮನ ಸೆಳೆಯುತ್ತಿದ್ದವು.

ಬೆಂಗಳೂರು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು, ಪ್ರಮುಖವಾಗಿ ತೋಟಗಾರಿಕಾ ಬೆಳೆಗಳಾದ ಹಣ್ಣುಗಳಾದ ಮಾವು, ನೇರಳೆ, ಹಲಸು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು ಕೃಷಿ ಯಂತ್ರೋಪಕರಣಗಳು ಖರೀದಿಗೆ ಅವಕಾಶ ನೀಡಲಾಗಿತ್ತು.

ರೈತ ಸಂತೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.